ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿ ಗೋಣಿತುಮಕೂರು ಬಳಿ ಐವರ ಮೇಲೆ ದಾಳಿ ನಡೆಸಿ, ತೋಟದ ಮನೆಯಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು ಸೆರೆಹಿಡಿದರು.
ಬುಧವಾರ ಐದು ಜನರ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ರೈತರೊಬ್ಬರು ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಕುಂಞ ಅಹಮದ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಬುಧವಾರ ತಡರಾತ್ರಿವರೆಗೆ ಕಾರ್ಯಚರಣೆ ನಡೆಸಿದರೂ ಬೋನಿಗೆ ಕೆಡವಲು ಸಾದ್ಯವಾಗಲಿಲ್ಲ. ನಂತರ ಮೈಸೂರಿನ ಪಶು ವೈದ್ಯಾಧಿಕಾರಿ, ಅರವಳಿಕೆ ತಜ್ಞ ವಾಸಿಂ ಅವರು ಗನ್ ಬಳಸಿ ಚಿರತೆಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿದ ಬಳಿಕ ಬಲೆ ಮೂಲಕ ಹಿಡಿದು ಬೋನ್ನಲ್ಲಿ ಬಂಧಿಸಿ ಬಂಡಿಪುರ ಅರಣ್ಯಕ್ಕೆ ಬಿಡಲು ಸಾಗಿಸಲಾಯಿತು.
ತುರುವೇಕೆರೆ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಇದ್ದರೂ ಮನುಷ್ಯರ ಮೇಲೆ ದಾಳಿ ನೆಡೆಸಿದ್ದು ಇದೇ ಮೊದಲು. ಬಂಧಿಸಲಾದ ಚಿರತೆ ಎರಡೂವರೆ ವರ್ಷದ ಗಂಡು ಚಿರತೆಯಾಗಿದ್ದು ಬಂಡಿಪುರ ಅರಣ್ಯಕ್ಕೆ ಬಿಡಲಾಗಿದೆ. ತಾಲ್ಲೂಕಿನ ಹಲವೆಡೆಗಳಲ್ಲಿ ಬೋನ್ ಇಡಲಾಗಿದೆ. ಚಿರತೆ ಇರುವೆಡೆ ರೈತರು ಬಹಳ ಎಚ್ಚರಿಕೆಯಿಂದ ಇರಬೇಕು. ಚಿರತೆ ಕಂಡು ಬಂದರೆ ಮಾಹಿತಿ ನೀಡಬೇಕು ಎಂದು ವಲಯ ಅರಣ್ಯಾಧಿಕಾರಿ ಅಮಿತ್ ತಿಳಿಸಿದರು.
ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು: ಐವರ ಮೇಲೆ ದಾಳಿ ನಡೆಸಿದ್ದರಿಂದ ಗೋಣಿತುಮಕೂರು, ದೇವಿಹಳ್ಳಿ, ನಡುವನಹಳ್ಳಿ ಭಾಗದ ಜನರಲ್ಲಿ ಭಯದ ವಾತವರಣ ಎದುರಾಗಿತ್ತು. ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಿ ಚಿರತೆ ಹಿಡಿದ ನಂತರ ಈ ಭಾಗದ ರೈತರು ನಿಟ್ಟಿಸಿರು ಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.