ADVERTISEMENT

ಪರಂಪರೆ ಜೊತೆ ರಂಗಭೂಮಿ ಕೆಲಸ ಮಾಡಲಿ

ಕನ್ನಡ ಭವನದಲ್ಲಿ ಫೋಕಸ್‌ ಸಂಸ್ಥೆ ಆಯೋಜಿಸಿದ್ಧ ಅಭಿಯನ ಕಾರ್ಯಾಗಾರ ಸಮಾರೋಪದಲ್ಲಿ ಡಾ.ಲಕ್ಷ್ಮಣದಾಸ್ ಆಶಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 16:28 IST
Last Updated 3 ಜುಲೈ 2019, 16:28 IST
ಅಭಿನಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ನಟರಾಜ್ ಹೊನ್ನವಳ್ಳಿ ಮಾತನಾಡಿದರು.ಉಗಮ ಶ್ರೀನಿವಾಸ್, ಬಾ.ಹ.ರಮಾಕುಮಾರಿ, ಲಕ್ಷ್ಮಣದಾಸ್, ಗೋಮಾರದಹಳ್ಳಿ ಮಂಜುನಾಥ್  ಇದ್ದರು
ಅಭಿನಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ನಟರಾಜ್ ಹೊನ್ನವಳ್ಳಿ ಮಾತನಾಡಿದರು.ಉಗಮ ಶ್ರೀನಿವಾಸ್, ಬಾ.ಹ.ರಮಾಕುಮಾರಿ, ಲಕ್ಷ್ಮಣದಾಸ್, ಗೋಮಾರದಹಳ್ಳಿ ಮಂಜುನಾಥ್  ಇದ್ದರು   

ತುಮಕೂರು: ನಮ್ಮ ಪರಂಪರೆ ಜೊತೆ ಆಧುನಿಕ ರಂಗಭೂಮಿ ಕೆಲಸ ಮಾಡಬೇಕು ಎಂದು ಕಥಾ ಕೀರ್ತನಕಾರ ಡಾ. ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.

ನಗರದ ಕನ್ನಡ ಭವನದಲ್ಲಿ ದಿ ಫೋಕಸ್‌ವತಿಯಿಂದ ಆಯೋಜಿಸಿದ್ದ 10 ದಿನಗಳ ಅಭಿನಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಈಗ ಅಭಿನಯ ಕಲಿಸಲು ಹಲವಾರು ತಂತ್ರಜ್ಞಾನ ಮತ್ತು ರಂಗ ಶಾಲೆಗಳಿವೆ. ಆದರೆ, ವೃತ್ತಿ ರಂಗಭೂಮಿ ಕಾಲದಲ್ಲಿ ಇವ್ಯಾವೂ ಇರಲಿಲ್ಲ. ಒಬ್ಬನನ್ನು ನೋಡಿ, ಕೇಳಿ ಕಲಿಯಬೇಕಾಗಿತ್ತು. ಹೀಗಾಗಿ, ಆಧುನಿಕ ರಂಗಭೂಮಿ ನಮ್ಮ ಪರಂಪರೆಯನ್ನು ಜೊತೆ ತೆಗೆದುಕೊಂಡು ಹೋಗಬೇಕು’ ಎಂದರು.

ADVERTISEMENT

‘ನಟರಾಜ್ ಹೊನ್ನವಳ್ಳಿ ಅವರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಇವರ ಅನುಭವ ನಮ್ಮ ತುಮಕೂರಿನ ರಂಗಭೂಮಿಗೆ ಬೇಕು’ ಎಂದು ತಿಳಿಸಿದರು.

ರಂಗ ನಿರ್ದೇಶಕ ಹಾಗೂ ದಿ ಫೋಕಸ್‌ನ ಸಂಸ್ಥಾಪಕ ನಟರಾಜ್ ಹೊನ್ನವಳ್ಳಿ ಮಾತನಾಡಿ, ‘ರಂಗಭೂಮಿ ಮತ್ತು ಸಿನಿಮಾ ಇವತ್ತಿನ ಮುಖ್ಯ ಮಾಧ್ಯಮ. ಈ ಎರಡೂ ಮಾಧ್ಯಮಗಳಲ್ಲಿ ಯುವಕರು ಕೆಲಸ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು’ ಎಂದರು.

’ತುಮಕೂರು ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯನ್ನು ಹೊಸದಾಗಿ ರಂಗಭೂಮಿ ಮತ್ತು ಅಭಿನಯದ ಮೂಲಕ ದಾಖಲಿಸಬೇಕಾದ ಅವಶ್ಯಕತೆ ಇದೆ’ ಎಂದರು.

ನಟ ಗೋಮಾರದಹಳ್ಳಿ ಮಂಜುನಾಥ್ ಮಾತನಾಡಿ, ‘ರಂಗಕರ್ಮಿಗಳು ಸಿನಿಮಾ ಬಗ್ಗೆ ಒಂದು ರೀತಿಯ ಅಸಡ್ಡೆ ತೋರುತ್ತಾರೆ. ಆದರೆ, ನಟರಾಜ್ ಹೊನ್ನವಳ್ಳಿ ಅವರು ಎರಡೂ ಮಾಧ್ಯಮವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ದೃಷ್ಟಿಕೋನವನ್ನು ಹೊಂದಿದ್ದಾರೆ’ ಎಂದು ನುಡಿದರು.

ಝೆನ್ ಟೀಮ್‌ನ ಉಗಮ ಶ್ರೀನಿವಾಸ್ ಮಾತನಾಡಿ, ‘ಎರಡೂವರೆ ದಶಕಗಳ ಹಿಂದೆ ಈಗ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ತಿಪಟೂರಿನ ಬಹಳಷ್ಟು ಜನ ರಂಗಭೂಮಿಯ ಬೇರೆ ಬೇರೆ ಪ್ರಾಕಾರಗಳಲ್ಲಿ ತೊಡಗಿಕೊಂಡಿರುವುದರ ಹಿಂದೆ ನಟರಾಜ್ ಹೊನ್ನವಳ್ಳಿ ಅವರ ಪ್ರೇರಣೆ ಕಾರಣ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಮಾತನಾಡಿ, ‘ನಮ್ಮ ಆವರಣದಲ್ಲಿ ಎಲ್ಲ ರೀತಿಯ ಸಾಹಿತ್ಯ, ಸಂಗೀತ ಪ್ರಾಕಾರಗಳಿಗೆ ಅವಕಾಶವಿದೆ ಎಂದರು.

ಈಗ ತರಬೇತಿ ಹೊಂದಿರುವ ಯುವಕರು ಮುಂದೆ ರಂಗಭೂಮಿಯಲ್ಲಿ ಪ್ರಜ್ವಲಿಸಿ ಎಂದು ಹಾರೈಸಿದರು.

ಕಾರ್ಯಾಗಾರದಲ್ಲಿ ತುಮಕೂರು, ಶಿರಸಿ, ಬಳ್ಳಾರಿ, ಬಾಗಲಕೋಟೆ, ಬೆಂಗಳೂರು, ಮೈಸೂರು ಮುಂತಾದ ಜಿಲ್ಲೆಗಳಿಂದ ಬಂದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.