ತುಮಕೂರು: ‘ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಮೇ 23ರಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿದ್ದು, ಮತ ಎಣಿಕಾ ಕೊಠಡಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ’ ಎಂದು ಸಹಾಯಕ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಹೇಳಿದರು.
ಸೋಮವಾರ ನಗರದ ಬಾಲಭವನದಲ್ಲಿ ಎಣಿಕೆ ಮೇಲ್ವಿಚಾರಕರು,ಸಹಾಯಕರು ಹಾಗೂ ಮೈಕ್ರೋ ಅಬ್ಸರ್ವರ್ಗಳಿಗಾಗಿ ಏರ್ಪಡಿಸಿದ್ದ ಮತ ಎಣಿಕೆ ವಿಧಾನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮತ ಎಣಿಕಾ ವೀಕ್ಷಕರನ್ನು ಹೊರತುಪಡಿಸಿ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿ ಮತ ಎಣಿಕಾ ಕೊಠಡಿಗೆ ಮೊಬೈಲ್ಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಪ್ರತಿ ಮತ ಎಣಿಕೆ ಟೇಬಲ್ಗೆ ಒಬ್ಬ ಎಣಿಕೆ ಮೇಲ್ವಿಚಾರಕರು, ಒಬ್ಬ ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್ಗಳನ್ನು ನೇಮಿಸಲಾಗಿದ್ದು, ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.
‘ಮೇಲ್ವಿಚಾರಕರು, ಸಹಾಯಕರು ಹಾಗೂ ಅಬ್ಸರ್ವರ್ಗಳು ಮತ ಎಣಿಕೆ ಕೊಠಡಿಗೆ ಬರುವಾಗ ಕಡ್ಡಾಯವಾಗಿ ಗುರುತಿನ ಚೀಟಿ (ಐ.ಡಿ.ಕಾರ್ಡ್) ಧರಿಸಿರಬೇಕು. ತಪ್ಪಿದ್ದಲ್ಲಿ ಅಂತಹವರಿಗೆ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಎಣಿಕಾ ಕಾರ್ಯದಲ್ಲಿ ಮರು ಪರಿಶೀಲನೆ ಮಾಡುವುದು ಅಬ್ಸರ್ವರ್ಗಳ ಕರ್ತವ್ಯವಾಗಿದ್ದು, ಅಂಚೆ ಮತ ಪತ್ರ ಎಣಿಕೆ ಮಾಡುವಾಗ ಮೈಕ್ರೋ ಅಬ್ಸರ್ವರ್ಗಳು ಸಹಾಯಕ ಚುನಾವಣಾಧಿಕಾರಿಗೆ (ಎಆರ್ಓ) ಎಣಿಕಾ ವರದಿ ನೀಡಬೇಕು’ ಎಂದು ತಿಳಿಸಿದರು.
‘ಅಂಚೆ ಮತ ಪತ್ರಗಳಲ್ಲಿ ಮೊದಲು ಘೋಷಣಾ ಪತ್ರವನ್ನು ಗಮನಿಸಬೇಕು. ಪತ್ರಾಂಕಿತ ಅಧಿಕಾರಿಯ ಸಹಿ ಕಡ್ಡಾಯವಾಗಿ ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಲಕೋಟೆ ಮತ್ತು ಸೀಲ್ಗಳನ್ನು ಪರಿಶೀಲಿಸಲು ಅಭ್ಯರ್ಥಿ, ಏಜೆಂಟರ್ಗಳಿಗೆ ಅವಕಾಶವಿದ್ದು, ಕಂಟ್ರೋಲ್ ಯೂನಿಟ್ ಸೂಟ್ಕೇಸ್ ಮತ್ತು ಅಡ್ರೆಸ್ ಟ್ಯಾಗ್, ವಿಶೇಷ ಟ್ಯಾಗ್ಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಮತ ಎಣಿಕೆ ಮಾಹಿತಿಯನ್ನು ಕೌಂಟಿಂಗ್ ಸೂಪರ್ವೈಸರ್ಗಳು ದಾಖಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬ್ಯಾಲೆಟಿಂಗ್ ಯೂನಿಟ್ಗಳನ್ನು ಹೊರಗೆ ತರಬಾರದು. ಹಳದಿ ಹಾಗೂ ಪಿಂಕ್ ಬಣ್ಣದ ನಮೂನೆ– 17(ಸಿ)ರಯಲ್ಲಿಯೇ ಮತ ಎಣಿಕಾ ಮಾಹಿತಿಯನ್ನು ದಾಖಲು ಮಾಡಬೇಕು’ ಎಂದು ಸೂಚಿದರು.
ರಾಜ್ಯಮಟ್ಟದ ತರಬೇತಿದಾರರಾದ ರಿಜ್ವಾನ್ ಬಾಷಾ, ಗೋಪಾಲ್ ಅವರು ತರಬೇತಿ ನೀಡಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ಶಿವಕುಮಾರ್ ಹಾಗೂ ಪೂವಿತಾ, ತಹಶೀಲ್ದಾರ್ ನಾಗರಾಜು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್, ಮೇಲ್ವಿಚಾರಕರು, ಸಹಾಯಕರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.