ಮಧುಗಿರಿ: ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳ ಹಾದಿಯಲ್ಲಿ ಪ್ರತಿಯೊಬ್ಬರು ಮುನ್ನಡೆಯಬೇಕು ಎಂದು ಚನ್ನೇನಹಳ್ಳಿ ಛಲವಾದಿ ಜಗದ್ಗುರು ಪೀಠದ ಬಸವಲಿಂಗಮೂರ್ತಿ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕು ಮಿಡಿಗೇಶಿ ಹೋಬಳಿ ನೇರಳೇಕೆರೆ ಗ್ರಾಮದಲ್ಲಿ ವೀರಬಾಲಮ್ಮದೇವಿ ದೇವಸ್ಥಾನ ಸಮಿತಿ ಟ್ರಸ್ಟ್ನಿಂದ ನಾಗರಪೂಜೆ ಮತ್ತು ದೇವಿಯ ಉತ್ಸವ ಕಾರ್ಯಕ್ರಮದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಛಲವಾದಿ ಸಮುದಾಯದವರು ಪ್ರತಿಭಾವಂತರಾಗಿದ್ದು, ಛಲದಿಂದ ಬದುಕುವವರು. ಅನಾದಿ ಕಾಲದಿಂದ ಕೃಷಿ ಚಟುವಟಿಕೆಗಳ ಜತೆ ಸಮಾಜ ಸೇವೆಯನ್ನು ಮಾಡಿಕೊಂಡು ಬಂದಿರುವ ಸಮುದಾಯವಾಗಿದೆ. ತಳಮಟ್ಟದ ಸಮುದಾಯ ಅನೇಕ ಶೋಷಣೆಗೆ ಒಳಗಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ದಯೆಯಿಂದ ಇಂದು ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಮನುಷ್ಯ ಜನ್ಮ ಪುಣ್ಯವಾಗಿದ್ದು, ಸಾಧನೆಯನ್ನು ಮಾಡಿ ಪರಹಿತವನ್ನು ಬಯಸಿ, ಪರೋಪಕಾರದ ಮೂಲಕ ಸಾಧನೆ ಮಾಡಿ ಬಾಳಿ ಬದುಕಬೇಕೆಂದು ತಿಳಿಸಿದರು.
ಶಾಸಕ ಎಂ.ವಿ.ವೀರಭದ್ರಯಯ್ಯ ಮಾತನಾಡಿ, ವಿದ್ಯೆ ಎಲ್ಲವನ್ನು ತಂದು ಕೊಡುತ್ತದೆ. ಆದ್ದರಿಂದ ಪೋಷಕರಿಗೆ ಎಷ್ಟೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಟ್ರಸ್ಟ್ನ ಅಭಿವೃದ್ಧಿಯನ್ನು, ಸಾಮಾಜಿಕ ಪ್ರಜ್ಞೆಯನ್ನು ತೋರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣ್ ದಾಸ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎನ್.ಆರ್.ಶಾಂತರಾಜು, ನಿವೃತ್ತ ತಾಂತ್ರಿಕ ನಿರ್ದೇಶಕ ಬಿ.ಎಂ.ಗೋವಿಂದರಾಜು, ಪಶು ಇಲಾಖೆಯ ವೈದ್ಯ ರಾಜಣ್ಣ, ತಾಲ್ಲೂಕು ಛಲವಾದಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ನಾಗರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ರಂಗರಾಜು, ರಾಷ್ಟ್ರೀಯ ಕುಸ್ತಿಪಟು ಬಿ.ಆರ್.ಮಹೇಶ್, ಪ್ರೊ.ಮಂಜುನಾಥ್, ಕೋಡ್ಲಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುನಾಥ್, ಗ್ರಾ.ಪಂ ಅಧ್ಯಕ್ಷೆ ಚಂದ್ರಮ್ಮ, ಉಪಾಧ್ಯಕ್ಷ ಶಿವಣ್ಣ, ತಾ.ಪಂ ಸದಸ್ಯೆ ಚಿಕ್ಕತಾಯಮ್ಮ, ಮುಖಂಡರಾದ ಟಿ.ಗೋವಿಂದರಾಜು, ಎನ್.ಆರ್.ಅಂಬೇಡ್ಕರ್, ಗಂಗಾಧರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.