ADVERTISEMENT

ಶುದ್ಧ ನೀರಿನ ಘಟಕ ಪಾಲಿಕೆಯೇ ನಿರ್ವಹಿಸಲಿ

​ಪ್ರಜಾವಾಣಿ ವಾರ್ತೆ
Published 9 ಮೇ 2019, 20:11 IST
Last Updated 9 ಮೇ 2019, 20:11 IST
ಜಿ.ಬಿ.ಜ್ಯೋತಿಗಣೇಶ್
ಜಿ.ಬಿ.ಜ್ಯೋತಿಗಣೇಶ್   

ತುಮಕೂರು: ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆಯೇ ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಹಾನಗರ ಪಾಲಿಕೆ ಆಯುಕ್ತರಿಗೆ ಗುರುವಾರ ಮನವಿ ಮಾಡಿದ್ದಾರೆ.

ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ,ಶುದ್ಧ ನೀರು ದೊರಕಿಸುವುದು ಪಾಲಿಕೆಯ ಕರ್ತವ್ಯವಾಗಿದೆ. ಮಹಾನಗರ ಪಾಲಿಕೆಯಲ್ಲೇ ಲಭ್ಯ ಇರುವ ಯಾವುದಾದರೂ ಅನುದಾನದಲ್ಲಿ ಶುದ್ಧ ನೀರಿನ ಘಟಕಗಳ ನಿರ್ವಹಣೆ ಮಾಡಬೇಕು.ಈ ಕುರಿತು ಮೇಯರ್, ಉಪಮೇಯರ್, ವಿರೋಧ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯರ ಸಭೆಯನ್ನು ಕರೆದು ಶುದ್ಧ ನೀರಿನ ಘಟಕಗಳ ಬಗೆಗಿನ ಗೊಂದಲ ಸರಿಪಡಿಸಬೇಕು ಎಂದು ಮನವಿ ಮಾಡಿದರು.

ಹೊರಗುತ್ತಿಗೆ ಬೇಡ: ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಹೊರಗುತ್ತಿಗೆ ಕೊಡಬಾರದು. ಇದರಿಂದ ನಾಗರಿಕರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ. 10 ಲೀಟರ್ ನೀರಿಗೆ ₹ 2 ನಿಗದಿಪಡಿಸಬೇಕು. 20 ಲೀಟರ್ ಶುದ್ಧ ನೀರಿನ ಕ್ಯಾನ್‌ಗೆ ₹ 4 ನಿಗದಿಪಡಿಸಬೇಕು. ಪಾಲಿಕೆ ವ್ಯಾಪ್ತಿಯ ಶುದ್ಧ ನೀರಿನ ಘಟಕಗಳ ನಿರ್ವಹಣೆಗೆ ಪಾಲಿಕೆಯೇ ಟೆಂಡರ್ ಕರೆಯಬೇಕು ಎಂದು ತಿಳಿಸಿದರು.

ADVERTISEMENT

ಶುದ್ಧ ನೀರಿನ ಘಟಕಗಳ ಸ್ಥಿತಿಯನ್ನು ಅರಿಯಲು ಆಯಾ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರು ಹಾಗೂ ವಾರ್ಡ್ ಸಮಿತಿ ಹಾಗೂ ನಾಗರಿಕ ವೇದಿಕೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಾರ್ಡ್ ಸಮಿತಿ, ನಾಗರಿಕ ವೇದಿಕೆಗಳ ಪಾಲ್ಗೊಳ್ಳುವಿಕೆಗೆ ಆಸಕ್ತಿವಹಿಸುವಂತಹ ಕೆಲಸ ಮಹಾನಗರ ಪಾಲಿಕೆಯಿಂದ ಆಗಬೇಕಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.