ತುಮಕೂರು: ಬಿಜೆಪಿ ಮುಖಂಡ, ಗುಬ್ಬಿ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ಆನ್ಲೈನ್ ವ್ಯವಹಾರ ನಂಬಿ ₹37,900 ಕಳೆದುಕೊಂಡಿದ್ದಾರೆ.
ನಗರದ ಎಸ್.ಎಸ್.ವೃತ್ತದ ಬಳಿಯ ಎನ್ಸಿಸಿ ಕಚೇರಿಯ ಮಿಲಿಟರಿ ಕಮಾಂಡೆಂಟ್ ಎಂದು ಹೇಳಿಕೊಂಡು ಜುಲೈ 13ರಂದು ವ್ಯಕ್ತಿಯೊಬ್ಬರು ದಿಲೀಪ್ ಕುಮಾರ್ಗೆ ವಾಟ್ಸ್ ಆ್ಯಪ್ ಕರೆ ಮಾಡಿದ್ದರು. ಕಚೇರಿ ದುರಸ್ತಿಗೆ 80 ಟನ್ ಜಲ್ಲಿ ಬೇಕಾಗಿದೆ ಎಂದು ಕೇಳಿದ್ದರು. ಮಿಲಿಟರಿ ಅಕೌಂಟೆಂಟ್ ಹಣದ ಬಗ್ಗೆ ನಿಮ್ಮ ಜತೆ ಮಾತನಾಡುತ್ತಾರೆ ಎಂದು ಕರೆ ಕಟ್ ಮಾಡಿದ್ದರು.
ಮತ್ತೊಂದು ನಂಬರ್ನಿಂದ ಕರೆ ಮಾಡಿ, ‘ನಾನು ಮಿಲಿಟರಿ ಅಕೌಂಟೆಂಟ್. ನಿಮಗೆ ಮುಂಗಡ ಹಣ ಪಾವತಿಸಲಾಗುವುದು’. ಕ್ಯೂ ಆರ್ ಕೋಡ್ಗೆ ₹1 ಹಣ ಹಾಕುವಂತೆ ಹೇಳಿದ್ದರು. ಇದರಂತೆ ದಿಲೀಪ್ ಕ್ಯೂ ಆರ್ ಕೋಡ್ಗೆ ₹1 ಪಾವತಿಸಿದ್ದಾರೆ. ಆ ಕಡೆಯಿಂದ ₹2 ವಾಪಸ್ ಕಳುಹಿಸಿದ್ದರು.
ನಂತರ ಮತ್ತೊಂದು ಕ್ಯೂ ಆರ್ ಕೋಡ್ ಕಳುಹಿಸಿದ್ದು, ಇದನ್ನು ಸ್ಕ್ಯಾನ್ ಮಾಡಿದರೆ ನಿಮಗೆ ₹40 ಸಾವಿರ ಸಿಗುತ್ತದೆ ಎಂದು ನಂಬಿಸಿದ್ದರು. ಸ್ಕ್ಯಾನ್ ಮಾಡಿದಾಗ ದಿಲೀಪ್ ಖಾತೆಯಿಂದಲೇ ₹37,900 ವರ್ಗಾವಣೆಯಾಗಿದೆ. ಎನ್ಸಿಸಿ ಕಚೇರಿಯಲ್ಲಿ ವಿಚಾರಿಸಿದಾಗ ಇದು ಸೈಬರ್ ವಂಚನೆ ಎಂಬುವುದು ಗೊತ್ತಾಗಿದೆ. ದಿಲೀಪ್ಕುಮಾರ್ ಸೈಬರ್ ಠಾಣೆಯ ಮೆಟ್ಟಿಲು ಹತ್ತಿದ್ದು, ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.