ADVERTISEMENT

ಪ್ರೇಯಸಿ ಆತ್ಮಹತ್ಯೆ ಬಳಿಕ ವಿಷ ಕುಡಿದ ಪ್ರಿಯತಮ: 6 ತಿಂಗಳ ನಂತರ ಅಸ್ಥಿಪಂಜರ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 11:18 IST
Last Updated 21 ಮೇ 2022, 11:18 IST
ಸಂತೋಷ
ಸಂತೋಷ   

ತುಮಕೂರು: ಪ್ರೀತಿಸಿದ ಯುವತಿಯ ಆತ್ಮಹತ್ಯೆಯಿಂದ ಬೇಸತ್ತ ಪ್ರಿಯತಮ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಆರು ತಿಂಗಳ ನಂತರ ಯುವಕನ ಅಸ್ಥಿ ಪಂಜರ ಕುಣಿಗಲ್‌ ತಾಲ್ಲೂಕಿನ ಹುಲಿಯೂರುದುರ್ಗದಿಂದ ಮಾಗಡಿಗೆ ಹೋಗುವ ಮಾರ್ಗಮಧ್ಯದ ಕಾಡಿನಲ್ಲಿ ಶುಕ್ರವಾರ ಪತ್ತೆಯಾಗಿದೆ.

ಶುಕ್ರವಾರ ಸಂಜೆ ಕಾಡುಶನೇಶ್ವರ ದೇವಾಲಯದ ಹಿಂಭಾಗದ ಕಾಡಿನ ಬಂಡೆ ಬಳಿ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದಾಗ ಅಸ್ಥಿಪಂಜರ ಸಿಕ್ಕಿದೆ. ವಾಹನದ ಸಂಖ್ಯೆ ಆಧರಿಸಿ ಮೃತನ ವಿಳಾಸ ಪತ್ತೆಯಾಗಿದ್ದು, ಮೃತ ವ್ಯಕ್ತಿ ತಾಲ್ಲೂಕಿನ ಅರಮನೆ ಹೊನ್ನಮಾಚನಹಳ್ಳಿಯ ಸಂತೋಷ (30) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಹೊಯ್ಸಳ ನಗರದಲ್ಲಿ ವಾಸವಿದ್ದರು.

ಸಂತೋಷ ತಾಲ್ಲೂಕಿನ ಕೆಬ್ಬಳಿಯ ಶಾಲಿನಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ, ವಿವಾಹಕ್ಕೆ ಪೋಷಕರು ನಿರಾಕರಿಸಿದ ಕಾರಣ ಶಾಲಿನಿ ಕಳೆದ ಅಕ್ಟೋಬರ್‌ 25 ರಂದು ವಿಷ ಸೇವಿಸಿದ್ದರು. ಮಂಡ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ 27 ರಂದು ಕೊನೆಯುಸಿರೆಳೆದಿದ್ದರು. ಯುವತಿಯ ಆತ್ಮಹತ್ಯೆಯ ಸುದ್ದಿ ಕೇಳಿದ ಸಂತೋಷ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು, ಪೋಷಕರು ಚಿಕಿತ್ಸೆ ಕೊಡಿಸಿದ್ದರು.

ADVERTISEMENT

ನವೆಂಬರ್ 28 ರಂದು ಬೆಂಗಳೂರಿನಿಂದ ಬಂದವನು, ಕಾಡಿನ ಬಂಡೆ ಬಳಿ ವಾಹನ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಶುಕ್ರವಾರ ಸಂಜೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹುಲಿಯೂರುದುರ್ಗದ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.