
ಕುಣಿಗಲ್: ತಾಲ್ಲೂಕಿನ ಮಂಗಳಾ ಜಲಾಶಯದ ತೂಬಿನ ಬಳಿ ಬಿರುಕು ಬಿಟ್ಟಿದ್ದು, ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಮಂಗಳವಾರ ರಾತ್ರಿ ಬಿರುಕು ಕಾಣಿಸಿಕೊಂಡಿದೆ. ನಂತರ ಅದು ದೊಡ್ಡದಾಗಿದ್ದು, ನೀರು ಹರಿಯುವ ಪ್ರಮಾಣ ಹೆಚ್ಚಾಗಿದೆ. ರಾತ್ರಿಯಿಂದ ಈಚೆಗೆ ಜಲಾಶಯದಿಂದ ಮೂರು ಅಡಿ ನೀರು ಹರಿದು ಹೋಗಿದೆ. ಏರಿ ಸಂರಕ್ಷಣೆ ಸಲುವಾಗಿ ಕ್ರಸ್ಟ್ ಗೇಟ್ ಮೂಲಕವೂ ನೀರನ್ನು ಹೊರಬಿಟ್ಟಿದ್ದು, ದುರಸ್ತಿ ಕಾರ್ಯಕ್ಕೆ ಜಲಾಶಯದ ಎಂಜಿನಿಯರುಗಳು ಮುಂದಾಗಿದ್ದಾರೆ.
ಮಂಗಳವಾರ ರಾತ್ರಿಯಿಂದಲೆ ಸಣ್ಣ ಪ್ರಮಾಣದ ಬಿರುಕಿನಿಂದ ನೀರು ಹರಿಯುತ್ತಿದ್ದು, ಮಧ್ಯರಾತ್ರಿ ಬಿರುಕು ಹೆಚ್ಚಾಗಿ ನೀರು ಹರಿಯಲಾರಂಭಿಸಿದೆ. ರಾತ್ರಿ ಎರಡು ಗಂಟೆಯ ಸಮಯದಲ್ಲಿ ಹೇಮಾವತಿ ನಾಲಾ ವಲಯದ ಅಧಿಕಾರಿಗಳ ತಂಡ ಭೇಟಿ ನೀಡಿ ಜಲಾಶಯದ ಏರಿ ಸಂರಕ್ಷಣೆಗೆ ಕ್ರಮ ತೆಗೆದುಕೊಂಡಿದ್ದಾರೆ. ಬುಧವಾರವೂ ರಕ್ಷಣೆ ಕಾರ್ಯ ಮುಂದುವರೆದಿದೆ. ಸಮೀಪದ ಹೊಲ, ಗದ್ದೆ ಬಯಲಿಗೆ ನೀರು ನುಗ್ಗಿ ಬೆಳೆ ನಾಶವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.