ಕೊರಟಗೆರೆ: ಪಟ್ಟಣದ ಕೋಟೆ ಮಾರಮ್ಮ, ಕೊಲ್ಲಾಪುರದಮ್ಮ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಮಂಗಳವಾರದಿಂದ ಆರಂಭವಾಗಿದ್ದು, ಶುಕ್ರವಾರ ಕೊನೆಯಾಗಲಿದೆ.
ಪ್ರತಿ ವರ್ಷ ಆಷಾಢ ಮಾಸದಲ್ಲಿ ಮೂರು ದಿನ ನಡೆಯುವ ಮಾರಮ್ಮನ ಜಾತ್ರೆಯನ್ನು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ.
ಪ್ರತಿನಿತ್ಯ ಸಾಂಪ್ರದಾಯಿಕ ಉತ್ಸವ, ತಂಬಿಟ್ಟಿನ ಆರತಿ ಹೊತ್ತು ತಂದು ಬೆಳಗುವರು.
ಜಾತ್ರೆಗೂ ಒಂದು ತಿಂಗಳ ಮುಂಚಿತವಾಗಿ ಊರಿನ ಗೌಡರು, ಶಾನುಭೋಗರು, ತೋಟಿ ತಳವಾರರ ಸಮ್ಮುಖದಲ್ಲಿ ಹಲವು ಸಾಂಪ್ರದಾಯಿಕ ಆಚರಣೆ ಮೂಲಕ ಜೇಡಿ ಮಣ್ಣನ್ನು ಪೂಜಾರರ ಮನೆಗೆ ತರಲಾಗುತ್ತದೆ. ಆ ಮಣ್ಣಿನಿಂದ ಪೂಜಾರರು ಮಾರಮ್ಮನ ಮೂರ್ತಿ ಮಾಡುತ್ತಾರೆ. ಜಾತ್ರೆ ಪ್ರಾರಂಭದ ದಿನ ಮಾರಮ್ಮನ ಮೂರ್ತಿಗೆ ಕಣ್ಣಿಟ್ಟು ಜೀವ ಕಳೆ ತುಂಬುತ್ತಾರೆ.
ಮೂರು ದಿನ ವಿವಿಧ ಉತ್ಸವಗಳು ನಡೆಯುತ್ತವೆ. ಕೊನೆ ದಿನ ಮಾರಮ್ಮ ದೇವಿಗೆ ವಿಶೇಷ ಪೂಜೆ, ಬಲಿ ಕೊಟ್ಟು ಊರ ಹೊರಗೆ ಸಾಗಾಕಿ ಬರುತ್ತಾರೆ.
ಅರ್ಚಕರಾದ ಶ್ರೀಧರಾಚಾರ್, ದೀಲಿಪ್, ಹರೀಶ್, ಅಶ್ವತ್ಥನಾರಾಯಣಚಾರ್, ಗೌಡರು, ಮುರಳಿ, ಪಣೆಗಾರ್ ಮಾರುತಿ ನಾಯಕ್, ತಳವಾರ್ ಲಕ್ಷೀಪತಿ, ಶೇರುದಾರರು, ಕೈವಾಡದವರು ಹಾಗೂ ತೊಟಿಗಳು, ದೇವಾಲಯದ ಧರ್ಮದರ್ಶಿಗಳು ಜಾತ್ರೆಯಲ್ಲಿ ಪಾಲ್ಗೊಳ್ಳುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.