ADVERTISEMENT

ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸವಾಲು

ಮನೆಗಳಿಂದಲೇ ದಿನಕ್ಕೆ ಒಂದೂವರೆ ಟನ್‌ ತ್ಯಾಜ್ಯ ಸಂಗ್ರಹ; ತಿಂಗಳಿಗೆ ₹4 ಲಕ್ಷ ಪಾವತಿ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 5:58 IST
Last Updated 13 ಡಿಸೆಂಬರ್ 2025, 5:58 IST
ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯಕೀಯ ತ್ಯಾಜ್ಯ
ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯಕೀಯ ತ್ಯಾಜ್ಯ   

ತುಮಕೂರು: ಸ್ಮಾರ್ಟ್‌ ಸಿಟಿಯಲ್ಲಿ ವೈದ್ಯಕೀಯ ತ್ಯಾಜ್ಯ ಸಂಗ್ರಹ, ಸಾಗಣೆ, ವಿಲೇವಾರಿ ಸವಾಲಾಗಿ ಪರಿಣಮಿಸಿದೆ. ಜತೆಗೆ ಇದು ಮಹಾನಗರ ಪಾಲಿಕೆಗೆ ಬಿಳಿಯಾನೆ ಸಾಕಿದಂತಾಗಿದೆ.

ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿ–ಅಂಶದ ಪ್ರಕಾರ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಸಂಶೋಧನಾ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲಿ 1,622 ವೈದ್ಯಕೀಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಂದ ದಿನಕ್ಕೆ 1,600 ಕೆ.ಜಿ ವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 400 ಕೆ.ಜಿ ತ್ಯಾಜ್ಯ ಸಂಗ್ರಹವಾಗುತ್ತಿದೆ.

ಮಹಾನಗರ ಪಾಲಿಕೆಯ ಅಧಿಕಾರಿಗಳು ನೀಡುವ ಅಂಕಿ–ಸಂಖ್ಯೆ ಗಮನಿಸಿದರೆ ಆಸ್ಪತ್ರೆ, ಕ್ಲಿನಿಕ್‌, ನರ್ಸಿಂಗ್‌ ಹೋಮ್‌ಗಳಿಗಿಂತ ನಗರದ ಮನೆಗಳಲ್ಲಿಯೇ ಅತಿ ಹೆಚ್ಚು ವೈದ್ಯಕೀಯ ತ್ಯಾಜ್ಯ ಉತ್ಪತ್ತಿ ಆಗುತ್ತಿರುವುದು ಕಂಡು ಬರುತ್ತದೆ. ಎಲ್ಲ ಆಸ್ಪತ್ರೆಗಳಿಂದ ನಿತ್ಯ 1,600 ಕೆ.ಜಿ ತ್ಯಾಜ್ಯ ಸಿಕ್ಕರೆ, ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ದಿನಕ್ಕೆ 1,500 ಕೆ.ಜಿಗೂ ಅಧಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಈ ತ್ಯಾಜ್ಯ ವಿಲೇವಾರಿಗೆ ಪ್ರತಿ ತಿಂಗಳು ₹3.50 ಲಕ್ಷದಿಂದ ₹4 ಲಕ್ಷ ವ್ಯಯಿಸಲಾಗುತ್ತಿದೆ!

ADVERTISEMENT

ಆಸ್ಪತ್ರೆಗಳಲ್ಲಿ ನಿತ್ಯ ಸಾವಿರಾರು ಜನ ಚಿಕಿತ್ಸೆ ಪಡೆಯುತ್ತಾರೆ. ಇಲ್ಲಿ ಸಾವಿರಾರು ಕೆ.ಜಿ ವೈದ್ಯಕೀಯ ತ್ಯಾಜ್ಯ ಸಿಗುವುದು ಸಾಮಾನ್ಯ. ಇದರಲ್ಲಿ ಅಂತಹ ವಿಶೇಷತೆ ಏನೂ ಇಲ್ಲ. ಆದರೆ ‘ಮನೆಗಳಿಂದಲೇ ಟನ್‌ಗಟ್ಟಲೆ ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣ ಪಾವತಿಸಲಾಗುತ್ತಿದೆ’ ಎನ್ನುವ ಪಾಲಿಕೆಯ ಅಂಕಿ–ಸಂಖ್ಯೆ ಜನರಲ್ಲಿ ಆಶ್ಚರ್ಯ ಮೂಡಿಸಿದೆ.

‘ಮನೆಗಳಲ್ಲಿ ಟನ್‌ಗಟ್ಟಲೆ ವೈದ್ಯಕೀಯ ತ್ಯಾಜ್ಯ ಸಿಗಲು ಹೇಗೆ ಸಾಧ್ಯ? ವೈದ್ಯಕೀಯ ತ್ಯಾಜ್ಯ ವಿಲೇವಾರಿಯಲ್ಲಿ ಪಾಲಿಕೆ ಅಧಿಕಾರಿಗಳು ಗೋಲ್‌ಮಾಲ್‌ ಮಾಡುತ್ತಿದ್ದಾರೆ. ಹಣ ಲೂಟಿ ಹೊಡೆಯಲು ನಕಲಿ ಬಿಲ್‌ ಸೃಷ್ಟಿಸುತ್ತಿದ್ದಾರೆ’ ಎಂಬ ಆರೋಪಗಳು ಹಲವು ದಿನಗಳಿಂದ ಕೇಳಿ ಬರುತ್ತಿದ್ದವು. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ, ಮಹಾನಗರ ಪಾಲಿಕೆಯ ಅಂಕಿ–ಅಂಶ ಈ ಆರೋಪಕ್ಕೆ ಪುಷ್ಟಿ ನೀಡುತ್ತಿವೆ ಎಂಬುದು ಇದರ ಒಳ–ಹೊರಗನ್ನೂ ಬಲ್ಲವರ ಹೇಳಿಕೆ.

ತ್ಯಾಜ್ಯಕ್ಕೆ ಬೆಂಕಿ: ಆಸ್ಪತ್ರೆ, ಕ್ಲಿನಿಕ್‌, ರಕ್ತ ಕೇಂದ್ರಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯ ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ. ಜಿಲ್ಲಾ ಆಸ್ಪತ್ರೆ ಒಳಗೊಂಡಂತೆ ಬಹುತೇಕ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಎರಡು ದಿನಕ್ಕೊಮ್ಮೆ ದೊಡ್ಡಾಸ್ಪತ್ರೆ ತ್ಯಾಜ್ಯ ವಿಲೇವಾರಿಗೆ ಗೌರಿಬಿದನೂರಿನ ಖಾಸಗಿ ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಎರಡು ದಿನಕ್ಕೊಮ್ಮೆ ತಾಜ್ಯ ಸಂಗ್ರಹ ವಾಹನ ಆಸ್ಪತ್ರೆಗೆ ಬರುತ್ತಿಲ್ಲ.

ಜಿಲ್ಲಾ ಆಸ್ಪತ್ರೆ ತ್ಯಾಜ್ಯವನ್ನು ಶವಾಗಾರ ಮುಂಭಾಗದ ಕೋಣೆಗಳಲ್ಲಿ ಚೀಲದಲ್ಲಿ ಕಟ್ಟಿ ಇಡಲಾಗಿದೆ. ಹಲವು ದಿನಗಳಿಂದ ಇಲ್ಲಿಯೇ ಉಳಿದಿದೆ. ಕೆಲವು ಸಲ ಇಲ್ಲಿಯೇ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಇದು ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶವಾಗಾರದ ಪಕ್ಕದಲ್ಲಿಯೇ ಕ್ಯಾನ್ಸರ್‌ ಆಸ್ಪತ್ರೆಯೂ ಈಚೆಗೆ ಉದ್ಘಾಟನೆಯಾಗಿದೆ. ತ್ಯಾಜ್ಯ ಸುಡುವುದು ಮುಂದುವರಿದರೆ ಚಿಕಿತ್ಸೆಗೆ ಬಂದವರು ವಾಸನೆಯಿಂದ ನರಳಬೇಕಾಗುತ್ತದೆ. ವೈಜ್ಞಾನಿಕ ವಿಲೇವಾರಿಗೆ ತುರ್ತಾಗಿ ಕ್ರಮ ವಹಿಸಬೇಕಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು

ಸಂಸ್ಕರಣಾ ಘಟಕವಿಲ್ಲ

ಜಿಲ್ಲೆಯಲ್ಲಿ ಸಾವಿರಾರು ಆಸ್ಪತ್ರೆಗಳಿದ್ದು ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕಗಳಿಲ್ಲ. ತ್ಯಾಜ್ಯ ವಿಲೇವಾರಿಗೆ ದಾಬಸ್‌ಪೇಟೆ ಗೌರಿಬಿದನೂರು ಹಾಸನದ ಘಟಕಗಳನ್ನು ಆಶ್ರಯಿಸಬೇಕಾಗಿದೆ. ಖಾಸಗಿ ಸಂಸ್ಥೆಗಳು ಇವುಗಳ ನಿರ್ವಹಣೆ ಮಾಡುತ್ತಿವೆ. ‘ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ‘ಸಾಮೂಹಿಕ ಜೀವ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕ’ ಆರಂಭಿಸಿದರೆ ಹೊರ ಜಿಲ್ಲೆಗಳಿಗೆ ಸಾಗಿಸುವ ಸಾಗಣೆ ವೆಚ್ಚ ಉಳಿಯಲಿದೆ. ತ್ಯಾಜ್ಯ ವಿಲೇವಾರಿಯೂ ಸಕಾಲಕ್ಕೆ ಆಗುತ್ತದೆ’ ಎಂದು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಸಮಸ್ಯೆ ಇಲ್ಲ

ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಯಾವುದೇ ಸಮಸ್ಯೆ ಇಲ್ಲ. ಕಾಲ ಕಾಲಕ್ಕೆ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಿಂದ ಟೆಂಡರ್‌ ಕರೆಯಲಾಗುತ್ತದೆ. ಅದರಲ್ಲಿ ಅರ್ಹರನ್ನು ಪರಿಗಣಿಸಿ ವಿಲೇವಾರಿಗೆ ಅವಕಾಶ ನೀಡಲಾಗುತ್ತದೆ. ಡಾ.ಅಸ್ಗರ್‌ ಬೇಗ್‌ ಜಿಲ್ಲಾ ಶಸ್ತ್ರಚಿಕಿತ್ಸಕ ಜಿಲ್ಲಾ ಆಸ್ಪತ್ರೆ

ಲೋಕಾಯುಕ್ತದಲ್ಲಿ ದೂರು ದಾಖಲು

ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆಯನ್ನು ಲೋಕಾಯುಕ್ತವೂ ಪತ್ತೆ ಮಾಡಿದ್ದು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ನ. 14ರಂದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ವೈದ್ಯಕೀಯ ತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿ ಆಗದಿರುವುದನ್ನು ಗಮನಿಸಿದ್ದರು. ವೈದ್ಯಕೀಯ ತ್ಯಾಜ್ಯ ಮತ್ತು ಇತರೆ ದ್ರವ ತ್ಯಾಜ್ಯವನ್ನು ನೇರವಾಗಿ ಯುಜಿಡಿಗೆ ಬಿಡುತ್ತಿರುವುದು ಪತ್ತೆಯಾಗಿದ್ದು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ವರದಿ ಸಲ್ಲಿಸಲು ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕ ಪಾಲಿಕೆ ಅಧಿಕಾರಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.