ತುಮಕೂರು: ಬಾಲಗಂಗಾಧರನಾಥ ಸ್ವಾಮೀಜಿ ಆದಿಚುಂಚನಗಿರಿ ಕ್ಷೇತ್ರವನ್ನು ವಿದ್ಯಾಕಾಶಿಯನ್ನಾಗಿಸಿದರು ಎಂದು ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಕುಂಚಿಟಿಗರ ಯುವವೇದಿಕೆ ಹಮ್ಮಿಕೊಂಡಿದ್ದ ಬಾಲಗಂಗಾಧರನಾಥ ಸ್ವಾಮೀಜಿ 8ನೇ ವರ್ಷದ ಪುಣ್ಯ ಸ್ಮರಣೋತ್ಸವ, ಅನ್ನಸಂತರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆದಿಚುಂಚನಗರಿ ಮಠ ಹಾಗೂ ಕ್ಷೇತ್ರಕ್ಕೆ ವಿಶ್ವ ಭೂಪಟದಲ್ಲಿ ಮುಂಚೂಣಿಯ ಸ್ಥಾನವನ್ನು ಕಲ್ಪಿಸಿ ಕೊಟ್ಟರು. ರಾಜ್ಯವನ್ನು ಸಸ್ಯಕಾಶಿ
ಯನ್ನಾಗಿಸಬೇಕು ಎಂಬ ಸಂಕಲ್ಪ ಮಾಡಿದ್ದರು. ಅವರ ಸಂಕಲ್ಪ ಅಭಿಯಾನ ವಾಗಿ, ಆಂದೋಲವನವಾಗಿ ರೂಪುಗೊಂಡಿತು ಎಂದು ನೆನಪಿಸಿಕೊಂಡರು.
ಆದಿಚುಂಚನಗಿರಿ ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಸ್ವಾಮೀಜಿ ನಾಂದಿಹಾಡಿದ್ದರು.ಮಠವನ್ನು ನಭದೆತ್ತರಕ್ಕೆ ಬೆಳೆಸಿದರು. ಹುಟ್ಟಿನಿಂದಲೇ ಬಹುದೊಡ್ಡ ಕನಸುಗಾರರು. ತಾವು ಕಂಡ ಕನಸುಗಳಿಗೆ ಅಷ್ಟೇ ಸಮರ್ಥವಾಗಿ ನನಸಿನ ದೀಕ್ಷೆಯನ್ನು ಕೊಡುವ ಧೈರ್ಯ, ಇಚ್ಛಾಶಕ್ತಿ ಅವರಲ್ಲಿತ್ತು ಎಂದು ಸ್ಮರಿಸಿದರು.
ಬಾಲಗಂಗಾಧರನಾಥ ಸ್ವಾಮೀಜಿ ಹಿಂದೂ ಸಂಸ್ಕೃತಿಯ ಮೂರ್ತರೂಪವಾಗಿದ್ದರು. ಸನಾತನ ಹಿಂದೂ ಸಂಸ್ಕೃತಿಯ ಪ್ರಬಲ ವಕ್ತಾರರೂ ಆಗಿದ್ದರು. ಸಂಸ್ಕೃತ– ಸಂಸ್ಕೃತಿಯನ್ನು ಅನ್ಯೋನ್ಯವಾಗಿಸಿಕೊಂಡು ಬದುಕಿದ್ದರು. ಮಠವು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆಧ್ಯಾತ್ಮಿಕ ಶಕ್ತಿ ಕೇಂದ್ರವಾಗಿ ರೂಪಗೊಂಡಿತು ಎಂದು ಹೇಳಿದರು.
ಯುವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ರಾಮಮೂರ್ತಿಗೌಡ, ಮಹಾನಗರ ಪಾಲಿಕೆ ಸದಸ್ಯ ಮಹೇಶ್, ಪ್ರಿಂಟರ್ ಶ್ರೀಪತಿ, ಲಿಖಿತಗೌಡ, ಶಶಿಧರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.