
ತುಮಕೂರು: ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ವಿಶೇಷ ಮೆಮು ರೈಲಿನ ‘ಹುಟ್ಟು ಹಬ್ಬ’ ಆಚರಿಸಲಾಯಿತು.
ರೈಲು ಪ್ರಯಾಣಿಕರ ಮನವಿ ಮೇರೆಗೆ 2013ರ ಆ. 3ರಿಂದ ವಿಶೇಷ ರೈಲು ಸಂಚಾರ ಆರಂಭಿಸಲಾಗಿತ್ತು. ಅಂದಿನಿಂದ ಪ್ರತಿ ವರ್ಷ ರೈಲಿನ ಹುಟ್ಟು ಹಬ್ಬ ಆಚರಿಸಲಾಗುತ್ತಿದೆ. ಪ್ರಯಾಣಿಕರ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಪ್ರಯಾಣಿಕರು ಸಡಗರದಿಂದ ರೈಲು ಎಂಜಿನ್ಗೆ ಬಾಳೆ ದಿಂಡು ಕಟ್ಟಿದರು. ಹೂವು, ಬಲೂನುಗಳಿಂದ ರೈಲು ಸಿಂಗರಿಸಿದರು. ಕೇಕ್ ಕತ್ತರಿಸಿ ಸಂಭ್ರಮಿಸಿದರು. ಎಲ್ಲರಿಗೆ ಸಿಹಿ ಹಂಚಿ ಖುಷಿಪಟ್ಟರು.
ರೈಲ್ವೆ ಪ್ರಯಾಣಿಕರ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮವು ಆ. 18ರಂದು ನಡೆಯಲಿದೆ. ಉದ್ಯೋಗ ನಿಮಿತ್ತ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ರೈಲು ಪ್ರಯಾಣಿಕರನ್ನು ಅಭಿನಂದಿಸಲಾಗುತ್ತದೆ ಎಂದು ವೇದಿಕೆ ಪದಾಧಿಕಾರಿಗಳು ಮಾಹಿತಿ ಹಂಚಿಕೊಂಡರು.
ತುಮಕೂರು ರೈಲು ನಿಲ್ದಾಣ ವ್ಯವಸ್ಥಾಪಕ ಎಲ್.ನಾಗರಾಜ್, ರೈಲು ಪ್ರಯಾಣಿಕರ ವೇದಿಕೆ ಉಪಾಧ್ಯಕ್ಷರಾದ ಮಾಧವಮೂರ್ತಿ ಗುಡಿಬಂಡೆ, ಪರಮೇಶ್ವರ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.