ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ದೇಗುಲದ ಬಳಿ ಶುಕ್ರವಾರ ಮೇವು ಬ್ಯಾಂಕ್ಗೆ ಚಾಲನೆ ನೀಡಲಾಯಿತು.
ಜಿಲ್ಲೆಯಲ್ಲಿಯೇ ಮೊದಲ ಮೇವು ಬ್ಯಾಂಕ್ ಗ್ರಾಮದಲ್ಲಿ ಆರಂಭವಾದ ಕೂಡಲೇ ಸುತ್ತಮುತ್ತಲ ಗ್ರಾಮಗಳ ರೈತರು ಬಂದು ಜಾನುವಾರುಗಳಿಗಾಗಿ ಮೇವು ಕೊಂಡೊಯ್ದರು.
ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ನಾಗಲಮಡಿಕೆಯಲ್ಲಿ ಇದೀಗ ಮೇವು ಬ್ಯಾಂಕ್ ಆರಂಬಿಸಲಾಗಿದೆ. ವೈ.ಎನ್. ಹೊಸಕೋಟೆಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸ್ಥಳ ಪರಿಶೀಲನೆ ನಡೆಸಲಾಗಿದೆ. ಶೀಘ್ರ ಅಲ್ಲಿಯೂ ಆರಂಭಿಸಲಾಗುವುದು ಎಂದು ತಿಳಿಸಿದರು.
ಒಂದು ಜಾನುವಾರಿಗೆ ದಿನಕ್ಕೆ 6 ಕೆ.ಜಿ ಯಂತೆ ವಾರಕ್ಕೆ 42 ಕೆಜಿ ಮೇವು ವಿತರಿಸಲಾಗುತ್ತಿದೆ. ಒಂದು ಕೆ.ಜಿ. ಮೇವಿಗೆ ₹2 ನಿಗದಿಪಡಿಸಲಾಗಿದೆ. ಶುಕ್ರವಾರ 55 ರೈತರ 260 ಜಾನುವಾರುಗಳಿಗೆ ಸಾಕಾಗುವಷ್ಟು 10,920 ಕೆ.ಜಿ ಮೇವು ವಿತರಿಸಲಾಗಿದೆ. ಶನಿವಾರ 350 ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ವಿತರಿಸಲಾಗಿದೆ ಎಂದು ತಿಳಿಸಿದರು.
ದಿನದಿಂದ ದಿನಕ್ಕೆ ಮೇವು ಪಡೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಬೇಡಿಕೆಗೆ ತಕ್ಕಂತೆ ಮೇವು ಸರಬರಾಜು ಮಾಡಲಾಗುತ್ತಿದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ವರಕೇರಪ್ಪ ಮಾಹಿತಿ ನೀಡಿದರು.
ಹರಾಜು ಪಡೆದವರು ಆಂಧ್ರದಿಂದ ಮೇವು ಸರಬರಾಜು ಮಾಡುತ್ತಿದ್ದಾರೆ. ಶುಕ್ರವಾರ ಭತ್ತದ ಮೇವು ವಿತರಿಸಲಾಗಿದೆ. ಶನಿವಾರ ಮೆಕ್ಕೆ ಜೋಳದ ಮೇವು ವಿತರಿಸಲಾಗಿದೆ. ತೀವ್ರ ಬರ ಇರುವುದರಿಂದ ಜಾನುವಾರುಗಳಿಗೆ ಮೇವು ನೀಡಲಾಗದೆ ಪರದಾಡುತ್ತಿದ್ದ ನಾಗಲಮಡಿಕೆ ಹೋಬಳಿ ರೈತರು ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಇತರೆ ಮೂರು ಹೋಬಳಿಗಳಲ್ಲೂ ಶೀಘ್ರ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.