ತುಮಕೂರು: ನಗರದ ಸಾರ್ವಜನಿಕರು ಇನ್ನು ಮುಂದೆ ಆಟೊ ಸೇವೆಯನ್ನು ಆ್ಯಪ್ ಮೂಲಕ ಬುಕ್ ಮಾಡಿ ಬಳಕೆ ಮಾಡಿಕೊಳ್ಳಬಹುದಾಗಿದೆ. ‘ನಮ್ಮ ಯಾತ್ರಿ’ ಅಪ್ಲಿಕೇಶನ್ ಮೂಲಕ ಸೌಲಭ್ಯ ಲಭ್ಯವಾಗಲಿದೆ.
ನಗರದ ಯಲ್ಲಮ್ಮ ಪುಟ್ಟಪ್ಪ ಆರ್ಯ ಈಡಿಗರ ವಿದ್ಯಾರ್ಥಿ ನಿಲಯದ ಅವರಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ‘ನಮ್ಮ ಯಾತ್ರಿ’ ಆ್ಯಪ್ಗೆ ಚಾಲನೆ ನೀಡಲಾಯಿತು.
ನಮ್ಮ ಯಾತ್ರಿ ಸಮುದಾಯದ ನಿರ್ದೇಶಕ ರಾಜೀವ್, ‘ಈಗಾಗಲೇ ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಿದ್ದು, ಆಟೊ ಚಾಲಕರು ಹಾಗೂ ಪ್ರಯಾಣಿಕರಿಗೆ ಸಹಕಾರಿಯಾಗಿದೆ. ನಗರಕ್ಕೂ ಈ ಸೇವೆ ವಿಸ್ತರಿಸಿದ್ದು, ಸಾಕಷ್ಟು ಜನರಿಗೆ ಸಹಕಾರಿಯಾಗಲಿದೆ. ಆಟೊ ಚಾಲಕರು ಮತ್ತು ಗ್ರಾಹಕರ ನಡುವೆ ಸಾಮರಸ್ಯ ಬೆಸೆಯುವಲ್ಲಿ ಈ ಆ್ಯಪ್ ನೆರವಾಗಲಿದೆ’ ಎಂದು ಹೇಳಿದರು.
ನಮ್ಮ ಯಾತ್ರಿ ಮುಖ್ಯಸ್ಥ ಶ್ಯಾನ್, ‘ತುಮಕೂರಿನಲ್ಲಿ ಆಟೊ ಪ್ರಯಾಣವನ್ನು ಆಧುನೀಕರಿಸಲು, ಜನರ ಬೇಡಿಕೆಗೆ ಅನುಗುಣವಾಗಿ ನಿಗದಿತ ಪ್ರಯಾಣ ದರದೊಂದಿಗೆ ಸೇವೆ ಒದಗಿಸಲಾಗುತ್ತದೆ’ ಎಂದು ತಿಳಿಸಿದರು.
ಆಟೊ ಚಾಲಕರ ಸಂಘದ ಮುಖಂಡ ನವೀನ್ ಕುಮಾರ್, ‘ನಗರದಲ್ಲೂ ಇಂತಹ ಸೇವೆಗೆ ಸಾಕಷ್ಟು ಬೇಡಿಕೆ ಇತ್ತು. ಆ್ಯಪ್ ಬಳಸುವುದರ ಮೂಲಕ ಜನರು ತಾವಿದ್ದಲ್ಲೇ ಆಟೊ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ’ ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಬಿ.ಎಚ್.ರಾಜೇಶ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್, ಮುಖಂಡರಾದ ಎಂ.ಎಸ್.ಚಂದ್ರಶೇಖರ್, ಚಾಂದ್ ಪಾಷ, ನುಸ್ರತ್ ಉಲ್ಲಾ ಖಾನ್ ಷರೀಫ್ ಇತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.