ADVERTISEMENT

ಗುಬ್ಬಿ | ವಕೀಲರಿಗೆ ರಕ್ಷಣೆ ಇಲ್ಲ: ಆರೋಪ

ವಕೀಲರ ಹತ್ಯೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 4:11 IST
Last Updated 4 ಮಾರ್ಚ್ 2021, 4:11 IST
ಗುಬ್ಬಿಯ ಗ್ರೇಡ್‌–2 ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ವಕೀಲರು
ಗುಬ್ಬಿಯ ಗ್ರೇಡ್‌–2 ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ವಕೀಲರು   

ಗುಬ್ಬಿ: ನ್ಯಾಯಾಂಗದ ಭಾಗವಾಗಿದ್ದುಕೊಂಡು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಕೀಲರಿಗೆ ರಕ್ಷಣೆ ಇಲ್ಲದಂತಾಗಿರುವುದು ದುರದೃಷ್ಟಕರ ಎಂದುತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಜಿ. ಷಡಕ್ಷರಿ ಹೇಳಿದರು.

ಪಟ್ಟಣದ ವಕೀಲರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ವಮಾತನಾಡಿದರು.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ವಕೀಲರ ಸಂರಕ್ಷಣಾ ಕಾಯ್ದೆಯ ಕರಡು ಪ್ರತಿ ಸಿದ್ಧಪಡಿಸಿ 2019ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿದ್ದರೂ, ಸರ್ಕಾರ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ತಕ್ಷಣವೇ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತಂದು ವಕೀಲರ ರಕ್ಷಣೆಗೆ ಮುಂದಾಗಬೇಕು ಎಂದರು.

ADVERTISEMENT

ಫೆಬ್ರವರಿ 27ರಂದು ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ಹತ್ಯೆಗೀಡಾದ ವಕೀಲ ವೆಂಕಟೇಶ್ ಅವರ ಹತ್ಯೆ ಖಂಡಿಸಿ ತಾಲ್ಲೂಕಿನ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದರು. ನ್ಯಾಯಾಲಯದ ಆವರಣದಿಂದ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಶೀಲ್ದಾರ್ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಕೀಲ ಮಂಜುನಾಥ್ ಮಾತನಾಡಿ, ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಕರಡು ಪ್ರತಿಯನ್ನು ಕಾನೂನಾಗಿ ಮಾರ್ಪಡಿಸಿ ಜಾರಿಗೆ ತರಲೇಬೇಕು. ಈ ನಿಟ್ಟಿನಲ್ಲಿ ಮನವಿ‌ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಕೀಲರ ಮೇಲೆ ಪದೇಪದೇ ನಡೆಯುತ್ತಿರುವ ಹಲ್ಲೆಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರವು ತಕ್ಷಣವೇ ವಕೀಲ ಸಂರಕ್ಷಣೆ ಕಾನೂನನ್ನು ಜಾರಿಗೆ ತರಬೇಕಾಗಿದೆ ‌‌ಎಂದರು.

ವಕೀಲ ಶಾಂತಗೌಡ ಮಾತನಾಡಿ, ಸರ್ಕಾರವು ಮುಂದಿನ ಅಧಿವೇಶನದಲ್ಲಿಯೇ ಕಾನೂನನ್ನು ಜಾರಿಗೊಳಿಸಿ ಅವರ ರಕ್ಷಣೆಗೆ ಮುಂದಾಗಬೇಕಾದ ಅಗತ್ಯ ಇದೆ ಎಂದರು.

ವಕೀಲ ಸಂಘದ ಉಪಾಧ್ಯಕ್ಷ ಶಶಿಧರ, ಕಾರ್ಯದರ್ಶಿ ಮೋಹನ್, ಜಂಟಿ ಕಾರ್ಯದರ್ಶಿ ರವೀಶ್, ಖಜಾಂಚಿ ಯೋಗೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.