ಚಿಕ್ಕನಾಯಕನಹಳ್ಳಿ: ಪಟ್ಟಣದ ಮಾರುತಿ ನಗರದ ಬಳಿ ಪ್ಲಾಸ್ಟಿಕ್ ಚೀಲ, ಹರಿದ ಬಟ್ಟೆ, ಗೋಣಿ ತಾಟುಗಳಿಂದ ಟೆಂಟು ಹಾಕಿಕೊಂಡು ಬದುಕುತ್ತಿರುವ ಕೊರಚಾರ್ ದುರ್ಗಪ್ಪ ಮತ್ತು ಜ್ಯೋತಿ ಕುಟುಂಬಕ್ಕೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಪಡಿತರ ಚೀಟಿ, ಮತದಾರ ಗುರುತಿನ ಚೀಟಿಯಂತೂ ದೂರದ ಮಾತು.
ಈ ದಂಪತಿಗೆ ನಾಲ್ಕು ಹೆಣ್ಣುಮಕ್ಕಳು ಮತ್ತು ಮಗ ಇದ್ದಾನೆ. ಯಾರ ಬಳಿಯೂ ಆಧಾರ್ ಕಾರ್ಡ್ ಇಲ್ಲ.
ಸರ್ಕಾರದ ಯಾವುದೇ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಅನಿವಾರ್ಯ. ಇವರ ಬಳಿ ಆಧಾರ್ ಕಾರ್ಡ್ ಇಲ್ಲ. ಆಧಾರ್ ಕಾರ್ಡ್ಗೆ ಅರ್ಜಿ ಹಾಕಲು ಹೋದರೆ ವೋಟರ್ ಕಾರ್ಡ್ ಕೇಳುತ್ತಾರೆ. ವೋಟರ್ ಕಾರ್ಡ್ಗೆ ಅರ್ಜಿ ಹಾಕಲು ಹೋದರೆ ರೇಷನ್ ಕಾರ್ಡ್ ಅಥವಾ ವಿಳಾಸ ದೃಢೀಕರಣ ಕೇಳುತ್ತಾರೆ. ಹಾಗಾಗಿ ಈ ಕುಟುಂಬ ಎಲ್ಲ ಸೌಲಭ್ಯದಿಂದ ದೂರು ಉಳಿದಿದೆ.
ಆಧಾರ್ ಕಾರ್ಡ್ ಇಲ್ಲದೆ ಹಲವು ವರ್ಷಗಳಿಂದ ತಾಲ್ಲೂಕಿನಲ್ಲೇ ಬದುಕುತ್ತಿರುವ ನಾಲ್ಕಾರು ಅಲೆಮಾರಿ ಕುಟುಂಬಗಳು ತಾಲ್ಲೂಕಿನ ಹಲವೆಡೆ ಇವೆ. ಅಕ್ಷರ ವಂಚಿತ ಬಡ ಸಮುದಾಯಗಳ ಕಷ್ಟಕ್ಕೆ ಅಧಿಕಾರಿಗಳೇ ಮುತುವರ್ಜಿ ವಹಿಸಿ, ಸ್ಪಂದಿಸಬೇಕು ಎಂದು ಅಲೆಮಾರಿ ದಕ್ಕಲಿಗ ಸಂಘದ ರಾಜ್ಯ ಕಾರ್ಯದರ್ಶಿ ಶಾಂತರಾಜ್ ಮನವಿ ಮಾಡಿದ್ದಾರೆ.
‘ಅಲೆಮಾರಿ ಆಯೋಗಕ್ಕೆ ಒತ್ತಾಯ’
ಅಲೆಮಾರಿಗಳ ಅಸ್ಮಿತೆ ಜಾತಿ ಕುಲ ಮೂಲ ಮತ್ತು ಇತರೆ ಎಲ್ಲ ಗೊಂದಲಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳಲು ಅಲೆಮಾರಿ ಆಯೋಗದ ರಚನೆ ಅಗತ್ಯ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಲಾಗಿದೆ. ಶೀಘ್ರ ಆಯೋಗ ರಚಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರೂ ಅದು ಈಡೇರಿಲ್ಲ. ಮಾರಣಾಂತಿಕ ಕಾಯಿಲೆ ಅಪೌಷ್ಟಿಕತೆ ಮುಂತಾದ ಸಮಸ್ಯೆಗಳಿಂದಾಗಿ ಕೊರಗ ಜೇನುಕುರುಬ ದಕ್ಕಲಿಗ ಮುಂತಾದ ಅನೇಕ ಸಮುದಾಯಗಳಲ್ಲಿ ಸಾವು ಹೆಚ್ಚು. ಜನನ ಪ್ರಮಾಣ ಕುಸಿಯುತ್ತಿದೆ. ಇನ್ನೊಂದು ದಶಕದಲ್ಲಿ ಅನೇಕ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳು ನಶಿಸಿಹೋಗುವ ಸಾದ್ಯತೆಗಳು ರಾಚುತ್ತಿವೆ - ಸಿ.ಎಸ್.ದ್ವಾರಕಾನಾಥ್ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.