ಕುಣಿಗಲ್: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ 40ಕ್ಕೂ ಹೆಚ್ಚು ಅಹವಾಲು ಸಲ್ಲಿಕೆಯಾದವು.
ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ ತಂಡ ದೂರುಗಳನ್ನು ಸ್ವೀಕರಿಸಿದರು.
ಜಮೀನು ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆ, ಖಾತೆ ಬದಲಾವಣೆ, ಒತ್ತುವರಿ ತೆರವು, ಸಾರ್ವಜನಿಕ ರಸ್ತೆಗೆ ಅನುಕೂಲ, ನಿವೇಶನ ತಕರಾರು, ರಂಗಸ್ವಾಮಿ ಗುಡ್ಡ, ದೇವಾಲಯದ ಅವ್ಯವಸ್ಥೆ, ಅನಧಿಕೃತ ಬಡಾವಣೆ, ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದರು.
ಲೋಕಾಯುಕ್ತ ಅಧೀಕ್ಷಕ ಲಕ್ಷ್ಮಿನಾರಾಯಣ, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಜನರ ಸಮಸ್ಯೆಗೆ ಸ್ಪಂದಿಸಬೇಕು. ಸಮಸ್ಯೆಗಳು ಬಂದಾಗ ಸ್ಥಳಕ್ಕೆ ಭೇಟಿ ನೀಡುವುದರಿಂದ ವಾಸ್ತವ ಅರಿವಿಗೆ ಬಂದು ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗುತ್ತದೆ. ಸರ್ಕಾರಿ ಸ್ವತ್ತುಗಳ ರಕ್ಷಣೆಗೆ ಅಧಿಕಾರಿಗಳು ಮುತುವರ್ಜಿವಹಿಸಬೇಕಿದೆ. ಲಂಚ ಸ್ವೀಕರಿಸುವಾಗ ದಾಳಿ ನಡೆಸುವುದರ ಜತೆಗೆ ಅಧಿಕಾರಿಗಳ ನಿರ್ಲಕ್ಷ್ಯ, ಲೋಪಗಳ ಬಗ್ಗೆಯೂ ಗಮನಹರಿಸಿ, ಕಾನೂನು ಬದ್ಧ ಕಾರ್ಯನಿರ್ವಹಣೆಗೆ ಲೋಕಾಯುಕ್ತ ತಂಡ ಶ್ರಮಿಸುತ್ತಿದೆ ಎಂದರು.
ಡಿವೈಎಸ್ಪಿ ಉಮಾಶಂಕರ್, ಇನ್ಸ್ಪೆಕ್ಟರ್ ಸುರೇಶ್, ಮಹಮ್ಮದ್ ಸಲೀಂ, ಶಿವರುದ್ರಪ್ಪ ಮೇಟಿ, ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾರಾಯಣ್, ಸಿಪಿಐ ನವೀನ್ ಗೌಡ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.