ಶಿರಾ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಸಿ.ಸಿ ಕೆಡೆಟ್ಸ್ಗಳಿಂದ ‘ಆಪರೇಷನ್ ಅಭ್ಯಾಸ್’ ನಾಗರಿಕರ ಸುರಕ್ಷತೆ ಅಣಕು ಕವಾಯತು ಪ್ರದರ್ಶನ ನಡೆಸಲಾಯಿತು.
ಕಾಶ್ಮೀರದ ಪಹಲ್ಗಾಮ್ನಲ್ಲಿ ಏ.22ರಂದು ನಡೆದ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದೊಂದಿಗೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಿರುವ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಮೇ7ರಂದು ದೇಶದಾದ್ಯಂತ 244 ಸ್ಥಳಗಳಲ್ಲಿ ಅಣಕು ಕವಾಯತು ನಡೆಸಲು ಆದೇಶಿಸಿತ್ತು.
ಎನ್.ಸಿ.ಸಿ ಮಹಾನಿರ್ದೇಶಕ ಗುರ್ಬಿರ್ಪಾಲ್ ಸಿಂಗ್, ಅಣಕು ಕವಾಯತು ಬೆಂಬಲಿಸಿ ದೇಶದ ಎಲ್ಲ ಎನ್.ಸಿ.ಸಿ ಕೆಡೆಟ್ಗಳು ಪಾಲ್ಗೊಳ್ಳುವುದಾಗಿ ಎಕ್ಸ್ನಲ್ಲಿ ಟ್ವಿಟ್ ಮಾಡಿ ಎಲ್ಲ ಎನ್.ಸಿ.ಸಿ ಬೆಟಾಲಿಯನ್ಗಳಿಗೆ ಅಣಕು ಕವಾಯತು ನಡೆಸಲು ನಿರ್ದೇಶಿಸಿದ್ದರು.
ನಗರದ 4 ಕಾರ್ ಬೆಟಾಲಿಯನ್, 4/4 ಕಂಪನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಾದ 25 ಎನ್.ಸಿ.ಸಿ ಕೆಡೆಟ್ಗಳು ತುರ್ತು ನಾಗರಿಕ ರಕ್ಷಣಾ ಸಿದ್ಧತೆ ಅಣಕು ಕವಾಯತು ಪ್ರದರ್ಶನ ನೀಡಿದರು.
ಸೈರನ್ ಸದ್ದು ಮೊಳಗುತ್ತಿದಂತೆ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಗಳಲ್ಲಿ ಅವಿತುಕೊಳ್ಳುವುದು, ಅಂಗವಿಕಲರು ಮತ್ತು ವಯಸ್ಸಾದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಪ್ಯಾನಿಕ್ ಅಟ್ಯಾಕ್ ಮತ್ತು ಉಸಿರಾಟದ ಸಮಸ್ಯೆ ಎದುರಾದರೆ ಸಿ.ಪಿ.ಆರ್ ಮಾಡುವುದು, ಹತ್ತಿರದ ಅಸ್ಪತ್ರೆ ಅಥವಾ ವೈದ್ಯರ ಹತ್ತಿರ ಕರೆದುಕೊಂಡು ಹೋಗುವುದರ ಬಗ್ಗೆ ಅಣಕು ಪ್ರದರ್ಶನ ಮಾಡಲಾಯಿತು.
ಪ್ರಾಂಶುಪಾಲ ಡಿ.ಚಂದ್ರಶೇಖರಪ್ಪ, ಪತ್ರಾಂಕಿತ ವ್ಯವಸ್ಥಾಪಕ ಶ್ರೀನಿವಾಸಮೂರ್ತಿ, ಡಿ.ಆರ್ ಹೊನ್ನಾಂಜಿನಯ್ಯ, ಕಾಲೇಜಿನ ಎನ್.ಸಿ.ಸಿ ಸಿ.ಟಿ.ಒ ಶ್ರೀಕೃಷ್ಣ ವಿ.ವೈ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.