
ಗುಬ್ಬಿ: ಸರ್ಕಾರದ ಭಾಗವಾಗಿರುವುದರಿಂದ ಹೇಮಾವತಿ ಲಿಂಕ್ ಕೆನಾಲ್ ವಿಚಾರದಲ್ಲಿ ಬೀದಿಗೆ ಇಳಿದು ಹೋರಾಟ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ನಿಟ್ಟೂರಿನಲ್ಲಿ ಬೆಸ್ಕಾಂ ಕಚೇರಿ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ನನ್ನ ವಿರೋಧವಿದೆ. ಬೀದಿಗೆ ಇಳಿದು ಹೋರಾಡುವುದಕ್ಕೆ ಬದಲಾಗಿ ಶಾಸನಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಯಾರು ಎಷ್ಟೇ ಬೊಬ್ಬೆ ಹೊಡೆಯಲಿ, ತಾಲ್ಲೂಕಿನ ಜನತೆಯ ಪರವಾಗಿ ನಾನು ನಿಲ್ಲುತ್ತೇನೆ’ ಎಂದರು.
‘ನನಗೆ ಅಧಿಕಾರಕ್ಕಿಂತ ತಾಲ್ಲೂಕಿನ ಅಭಿವೃದ್ಧಿ ಮುಖ್ಯ. ತಾಲ್ಲೂಕಿನ ಜನರ ಹಿತವನ್ನು ಎಂದಿಗೂ ಕಡೆಗಣಿಸುವುದಿಲ್ಲ. ತಾಲ್ಲೂಕಿನ ಜನತೆ ಯಾವುದೇ ಗಾಳಿ ಮಾತಿಗೂ ಕಿವಿಗೊಡಲು ಅವಕಾಶ ಕೊಡಬಾರದು’ ಎಂದು ತಿಳಿಸಿದರು.
ಸರ್ಕಾರವು ಇದೀಗ ಅನುದಾನ ಬಿಡುಗಡೆಗೊಳಿಸುತ್ತಿರುವುದರಿಂದ, ಅಭಿವೃದ್ಧಿ ಕೆಲಸಗಳನ್ನು ಮಾಡಲು ಆದ್ಯತೆ ನೀಡಲಾಗುತ್ತಿದೆ. ತಾಲ್ಲೂಕಿನ ನೀರಾವರಿ ಯೋಜನೆ, ರಸ್ತೆ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳಿಗಾಗಿ ಹೆಚ್ಚಿನ ಅನುದಾನ ಒದಗಿಸುವಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಲಾಗುವುದು’ ಎಂದರು.
ನಿಟ್ಟೂರಿಗೆ ಬಸ್ ನಿಲ್ದಾಣದ ಅಗತ್ಯವಿದ್ದು, ಸದ್ಯ ಜಾಗ ದೊರೆಯದ ಕಾರಣ ಏನೂ ಮಾಡಲಾಗುತ್ತಿಲ್ಲ. ಸೂಕ್ತವಾದ ಜಾಗ ದೊರೆತಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತುಮಕೂರು ಬೆಸ್ಕಾಂ ಇಲಾಖೆಯ ಇಇ ಪ್ರಶಾಂತ್ ಕೂಡ್ಲಿಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಬೆಸ್ಕಾಂ ಇಲಾಖೆಯ ರಾಜೇಶ್, ಕಾಂತರಾಜು, ಗವಿ ಸಿದ್ದಪ್ಪ, ನಟರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.