ADVERTISEMENT

ತುಮಕೂರು | ಹೆಚ್ಚಿಗೆ ಪಡೆದ ₹79 ವಾಪಸ್‌ಗೆ ಆದೇಶ

ಪರಿಹಾರ ಕೊಡಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 4:06 IST
Last Updated 7 ಅಕ್ಟೋಬರ್ 2025, 4:06 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ತುಮಕೂರು: ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚುವರಿಯಾಗಿ ಪಡೆದುಕೊಂಡಿದ್ದ ₹79 ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಬೆಂಗಳೂರು ಫ್ಲಿಪ್‌ಕಾರ್ಟ್ ಸಂಸ್ಥೆ ವ್ಯವಸ್ಥಾಪಕ, ಫ್ಲಿಪ್‌ಕಾರ್ಟ್ ಇಂಟರ್‌ನೆಟ್ ವಿಭಾಗದ ವ್ಯವಸ್ಥಾಪಕ ಹಾಗೂ ಕೊಯಮತ್ತೂರಿನ ಯುಆರ್– ಕಿಡ್ಸ್ ಸ್ಟೋರ್ ಸಂಸ್ಥೆ ಜಂಟಿಯಾಗಿ ಹೆಚ್ಚುವರಿಯಾಗಿ ಪಡೆದುಕೊಂಡಿರುವ ಹಣವನ್ನು ವಾಪಸ್ ಮಾಡಬೇಕು. ಜತೆಗೆ ₹6 ಸಾವಿರ ಪರಿಹಾರ ಹಾಗೂ ₹6 ಸಾವಿರ ನ್ಯಾಯಾಲಯದ ವೆಚ್ಚವನ್ನು (ಒಟ್ಟು ₹12 ಸಾವಿರ) ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚುವರಿಯಾಗಿ ₹79 ಹಣವನ್ನು ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ಮಂಜುನಾಥ್ ಎಂಬುವರು ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಗರಿಷ್ಠ ಬೆಲೆಗಿಂತ ಹೆಚ್ಚು ಹಣ ಪಡೆದುಕೊಂಡು ನಷ್ಟ ಉಂಟು ಮಾಡಲಾಗಿದೆ. ಇದರಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಹಾಗಾಗಿ ₹50 ಸಾವಿರ ಪರಿಹಾರವನ್ನು ಶೇ 24ರಷ್ಟು ಬಡ್ಡಿ ಸಹಿತ ಕೊಡಿಸಬೇಕು ಎಂದು ಕೇಳಿಕೊಂಡಿದ್ದರು.

ADVERTISEMENT

ಪ್ರಕರಣದ ವಿವರ: ತುಮಕೂರು ತಾಲ್ಲೂಕಿನ ಮಲ್ಲಸಂದ್ರದ ಮಂಜುನಾಥ್ ಎಂಬುವರು 2024 ಮೇ 17ರಂದು ಫ್ಲಿಪ್ ಕಾರ್ಟ್ ಮೂಲಕ ಕಸೂತಿ ಮಾಡುವ ಥ್ರೆಡ್ (ಎಂಬ್ರಾಯಿಡರಿ ಕ್ರಾಸ್ ಸ್ಟಿಚ್ ಥ್ರೆಡ್) ಖರೀದಿಸಿದ್ದರು. ಕೊಯಮತ್ತೂರಿನ ಯುಆರ್– ಕಿಡ್ಸ್ ಸ್ಟೋರ್ ಸಂಸ್ಥೆ ಇದನ್ನು ಪೂರೈಸಿತ್ತು. ಥ್ರೆಡ್ ಗರಿಷ್ಠ ಮಾರಾಟ ಬೆಲೆ ₹520 (ಎಲ್ಲ ತೆರಿಗೆ ಸೇರಿ). ಆದರೆ ₹599 ಪಡೆದುಕೊಳ್ಳಲಾಗಿತ್ತು.

ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಜಿ.ಟಿ.ವಿಜಯಲಕ್ಷ್ಮಿ, ಸದಸ್ಯೆ ನಿವೇದಿತಾ ರವೀಶ್ ನೇತೃತ್ವದ ಪೀಠ ಹೆಚ್ಚುವರಿಯಾಗಿ ಪಡೆದುಕೊಂಡಿದ್ದ ₹79 ಹಣವನ್ನು ₹12 ಸಾವಿರ ಪರಿಹಾರದೊಂದಿಗೆ ನೀಡುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.