
ತೋವಿನಕೆರೆ: ಜನರಿಗೆ, ಪ್ರಕೃತಿಗೆ ವಿಷ ಉಣಿಸುವುದು ಹೆಚ್ಚಾಗುತ್ತಿದೆ. ಇದನ್ನು ತಡೆಯಲು ರೈತನಿಂದ ಮಾತ್ರ ಸಾಧ್ಯ ಎಂದು ಸಾಣೇಹಳ್ಳಿ ಪಂಡಿತ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ತೋವಿನಕೆರೆ ಸಮೀಪದ ಹೊಲತಾಳು ಗ್ರಾಮದ ಅಬೇತೋಸಂ ನಲ್ಲಿ ಭಾನುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಏರ್ಪಡಿಸಿದ್ದ ಸಾವಯವ ಬೇಸಾಯದ ಬದುಕು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಹೊರಗಡೆ ಸುಂದರವಾಗಿ ಕಾಣುತ್ತಿದು ಒಳಗಡೆ ಮಲಿನವಾಗುತ್ತಿದ್ದಾನೆ. ಪ್ರತಿ ದಿನ ಟನ್ಗಟ್ಟಲೆ ವಿಷವನ್ನು ನೆಲಕ್ಕೆ ಹಾಕುತ್ತಿದ್ದು ಅದರಲ್ಲಿ ಉತ್ಪತ್ತಿಯಾಗುವ ಆಹಾರವನ್ನು ಸೇವಿಸುತ್ತಿದ್ದೇವೆ. ವಿಷ ಸೇವಿಸುವ ನಾವು ನಮ್ಮ ಬದುಕಿನಲ್ಲಿ ವಿಷವನ್ನೇ ಹೊರ ಹಾಕಬೇಕಾದ ಅನಿವಾರ್ಯ ಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅಕಾಡೆಮಿ ಅಧ್ಯಕ್ಷ ಮುಕಂದರಾಜ್ ಎಲ್.ಎನ್ ಮಾತನಾಡಿ, ಸಾಹಿತ್ಯ ಹಾಗೂ ಕೃಷಿ ಪೂರಕವಾಗಿ ಕೆಲಸ ಮಾಡಬೇಕು. ಕೃಷಿ ಇಲ್ಲದೆ ಸಾಹಿತ್ಯ ಉಳಿಯಲು ಸಾಧ್ಯವೇ ಇಲ್ಲ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂದಿನ ದಿನಗಳಲ್ಲಿ ಕೃಷಿಗೆ ಒತ್ತುಕೊಟ್ಟು ಕೆಲಸ ಮಾಡುತ್ತದೆ. ಪ್ರಥಮ ಬಾರಿಗೆ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಡಿಸೆಂಬರ್ 5 ರಂದು ಗುಬ್ಬಿಯಲ್ಲಿ ಪ್ರಧಾನ ಮಾಡಲಾಗುತ್ತದೆ ಎಂದು ಪ್ರಕಟಿಸಿದರು.
ಜೆ.ಸಿ.ಪುರದ ಶಿವನಂಜಪ್ಪ ಬಾಳೆಕಾಯಿ, ಧಾರವಾಡದ ಚನ್ನಪ್ಪ ಅಂಗಡಿ, ಪಾಲಕ್ಷಯ್ಯ, ಮಲ್ಲಿಕಾ ಬಸವರಾಜು, ಅಕ್ಷಯ್ಯ ಕಲ್ಪದ ಮಂಜುನಾಥ, ಯರಬಳ್ಳಿ ಅರುಣಾ, ಪಾತಗಾನಹಳ್ಳಿ ನಟರಾಜು, ಲಕ್ಷ್ಮಿದೇವಮ್ಮ ಮಾತನಾಡಿದರು.
ಅಬೇತೋಸಂ ಮಾಲಿಕ ಡಾ.ಸಿದ್ಧಗಂಗಯ್ಯ ಹೊಲತಾಳು ಒಣಭೂಮಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.