ADVERTISEMENT

ಪರಮೇಶ್ವರ ಹಠಾವೊ: ಭಿತ್ತಿಪತ್ರ ಅಂಟಿಸಿದ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 17:21 IST
Last Updated 3 ಜೂನ್ 2019, 17:21 IST
ಪರಮೇಶ್ವರ
ಪರಮೇಶ್ವರ    

ತುಮಕೂರು: ನಗರದ ಪ್ರಮುಖ ರಸ್ತೆ ಸೇರಿದಂತೆ ನಗರದ ವಿವಿಧ ಕಡೆ ‘ಪರಮೇಶ್ವರ ಹಠಾವೊ ಕಾಂಗ್ರೆಸ್ ಬಚಾವೊ’ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಿಲಕ್ ಪಾರ್ಕ್ ಠಾಣೆಯ ಪೊಲೀಸರು ಇಬ್ಬರನ್ನು ಸೋಮವಾರ ಸಂಜೆ ಬಂಧಿಸಿದ್ದಾರೆ.

ರವಿ ಮತ್ತು ಶಿವಪ್ರಸನ್ನ ಬಂಧಿತ ಆರೋಪಿತರು. ರವಿ ನಗರದ ಬಡ್ಡಿಹಳ್ಳಿ ನಿವಾಸಿಯಾಗಿದ್ದು, ಶಿವಪ್ರಸನ್ನ ಜಯಪುರ ಬಡಾವಣೆಯವನಾಗಿದ್ದಾನೆ ಎಂದು ತಿಲಕ್ ಪಾರ್ಕ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ‍ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಭಿತ್ತಿಪತ್ರ ಯಾಕೆ ಅಂಟಿಸಿದೀರಿ? ಯಾರು ಅಂಟಿಸಲು ಹೇಳಿದ್ದರು? ನೀವೆ ಭಿತ್ತಿಪತ್ರ ಮಾಡಿಸಿದ್ದೀರಾ, ಬೇರೆಯವರು ಮಾಡಿಸಿಕೊಟ್ಟಿದ್ದರೆ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಪೊಲೀಸರು ಆರೋಪಿಗಳಿಗೆ ಪ್ರಾಥಮಿಕ ಹಂತದ ವಿಚಾರಣೆ ವೇಳೆ ಕೇಳಿದ್ದಾರೆ ಎನ್ನಲಾಗಿದೆ.

ADVERTISEMENT

ಯಾರು ಎಂಬುದು ಗೊತ್ತಿಲ್ಲ. ಹಣ ಕೊಟ್ಟು ಈ ಪೋಸ್ಟರ್ ಅಂಟಿಸಿ ಎಂದು ಹೇಳಿದ್ದರಿಂದ ಅಂಟಿಸಿದ್ದೆವು ಎಂದು ಆರೋಪಿಗಳು ಹೇಳಿದ್ದಾರೆ ಎಂದು ತಿಳಿದಿದೆ.

ಲೋಕಸಭಾ ಚುನಾವಣೆ ಮತ ಎಣಿಕೆ ಮುಗಿದ ಎರಡು ದಿನ ಬಿಟ್ಟು ಅಂದರೆ ಮೇ 25 ರಂದು ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಈ ಕುರಿತು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್.ರಾಮಕೃಷ್ಣ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.