ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಗರದ ಎಲ್ಲೆಡೆ ಶುಕ್ರವಾರ ರಾಷ್ಟ್ರಧ್ವಜ ರಾರಾಜಿಸಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಆಡಳಿತದಿಂದ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳಿಂದ ಕ್ರೀಡಾಂಗಣ ತುಂಬಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿವಿಧ ಗೀತೆ, ನೃತ್ಯದ ಮೂಲಕ ನೆರೆದಿದ್ದವರಲ್ಲಿ ರಾಷ್ಟ್ರ ಪ್ರೇಮ ಹೆಚ್ಚಿಸಿದರು. ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆ ತೊಟ್ಟ ಮಿಂಚಿದರು. ನೃತ್ಯ ಪ್ರದರ್ಶನದಿಂದ ವೀಕ್ಷಕರ ಮೆಚ್ಚುಗೆ ಪಾತ್ರರಾದರು. ಬೆಳಿಗ್ಗೆ 7 ಗಂಟೆಯಿಂದಲೇ ಕ್ರೀಡಾಂಗಣದ ಕಡೆಗೆ ಹೆಜ್ಜೆ ಹಾಕಿದರು. ಮಕ್ಕಳ ಆಸಕ್ತಿಗೆ ಪೋಷಕರು ನೀರೆರೆದರು.
ಸೇಂಟ್ ಮೇರಿಸ್ ಶಾಲೆಯ 800ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ‘ನಮ್ಮ ಕೀರ್ತಿ, ನಮ್ಮ ಸ್ಫೂರ್ತಿ, ಎಲ್ಲ ನಮ್ಮ ದೇಶ’ ಎಂಬ ಗೀತೆಗೆ ನೃತ್ಯ ಮಾಡಿದರು. ತಂಡದ ನೂರಾರು ಜನ ಒಂದೇ ರೀತಿಯಲ್ಲಿ ಹೆಜ್ಜೆ ಹಾಕುವ ಮೂಲಕ ನೋಡುಗರ ಗಮನ ಸೆಳೆದರು. ಚಪ್ಪಾಳೆ ಗಿಟ್ಟಿಸಿದರು.
ಕೆಪಿಎಸ್ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯ 500ಕ್ಕೂ ಹೆಚ್ಚು ಮಕ್ಕಳು ಭಾರತದ ಸೌಜನ್ಯ, ಸಂಸ್ಕೃತಿಯ ಶ್ರೀಮಂತಿಕೆ ಎತ್ತಿ ಹಿಡಿದರು. ವಿವಿಧತೆಯಲ್ಲಿ ಏಕತೆಯನ್ನು ಸಾರಿದರು. ವಿವಿಧ ಗೀತೆಗಳಿಗೆ ನೃತ್ಯ ಸಂಯೋಜಿಸಿದರು. ಭಗತ್ ಸಿಂಗ್, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ವಿವಿಧ ಗಣ್ಯರ ವೇಷಭೂಷಣ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಿದ್ಧಗಂಗಾ ಪ್ರೌಢ ಶಾಲೆ ವಿದ್ಯಾರ್ಥಿಗಳು ‘ಜೈ ಹೋ’ ಗೀತೆ ಮುಖಾಂತರ ರಂಜಿಸಿದರು. ಚೈತನ್ಯ ಟೆಕ್ನೊ ಕಾಲೇಜು ತಂಡದಿಂದ ‘ಮೇರ ಭಾರತ್ ಮಹಾನ್’ ಹಾಡಿಗೆ ನೃತ್ಯ ಪ್ರದರ್ಶಿಸಲಾಯಿತು. ಕೇಸರಿ, ಬಿಳಿ, ಹಸಿರು, ನೀಲಿ ಬಣ್ಣದ ಸಮವಸ್ತ್ರದಲ್ಲಿ ಪಾಲ್ಗೊಂಡಿದ್ದರು. ನಾಲ್ಕು ತಂಡದ ವಿದ್ಯಾರ್ಥಿಗಳು ದೇಶ ಪ್ರೇಮ ಮೂಡಿಸುವ ಕೆಲಸ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.