ಪಾವಗಡ: ಪಟ್ಟಣದ ಶನೈಶ್ಚರ ದೇಗುಲದಲ್ಲಿ ನಾಲ್ಕನೇ ಶ್ರಾವಣ ಶನಿವಾರ ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಭಕ್ತರು ಮುಂಜಾನೆ 3 ಗಂಟೆಯಿಂದ ಸರದಿಯಲ್ಲಿ ನಿಂತು ದರ್ಶನ ಪಡೆದರು.
ಸರದಿಯಲ್ಲಿ ನಿಂತ ಭಕ್ತರು ಮಳೆಯಲ್ಲಿ ನೆನೆಯದಂತೆ ದೇಗುಲದಿಂದ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಿನ ಜಾವ 3 ಗಂಟೆಯಿಂದಲೇ ಎಸ್ಎಸ್ಕೆ ವಸತಿ ನಿಲಯ ಬಳಿ ಕೇಶ ಮುಂಡನಕ್ಕಾಗಿ ಸರದಿಯಲ್ಲಿ ನಿಂತು ಭಕ್ತರು ಟಿಕೆಟ್ ಪಡೆದರು. 14 ಸಾವಿರಕ್ಕೂ ಹೆಚ್ಚು ಭಕ್ತರು ಕೇಶಮುಂಡನಕ್ಕೆ ಟಿಕೆಟ್ ಪಡೆದರೆ, 40 ಸಾವಿರಕ್ಕೂ ಹೆಚ್ಚಿನ ಮಂದಿ ಬೆಳಿಗ್ಗೆಯಿಂದ ಸಂಜೆಯವರೆಗೆ ದರ್ಶನ ಪಡೆದರು. ರಾತ್ರಿಯಿಡೀ ಪಟ್ಟಣದ ಶನೈಶ್ಚರ ವೃತ್ತದ ಬಳಿ ಭಕ್ತರು ತುಂಬಿದ್ದರು.
ಬೆಳಗಿನ ಜಾವ 4 ಗಂಟೆಯಿಂದಲೇ ಅಭಿಷೇಕ, ತೈಲಾಭಿಷೇಕ, ಕುಂಕುಮಾರ್ಚನೆ, ಸರ್ವಸೇವೆ, ತಾಳಿ ಪೂಜೆ ಇತ್ಯಾದಿ ಪೂಜೆ ನಡೆದವು.
ದೇಗುಲದ ಎಸ್ಎಸ್ಕೆ ಅನ್ನದಾಸೋಹ ಭವನದಲ್ಲಿ ಶುಕ್ರವಾರದಿಂದ ಸಹಸ್ರಾರು ಸಂಖ್ಯೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬಗೆ ಬಗೆಯ ಹೂವುಗಳಿಂದ ದೇಗುಲವನ್ನು ಅಲಂಕರಿಸಲಾಗಿತ್ತು. ಶುಕ್ರವಾರವೇ ವಿವಿಧೆಡೆಯಿಂದ ಭಕ್ತರು ಬಂದಿದ್ದರಿಂದ ವಾಹನದಟ್ಟಣೆ ಹೆಚ್ಚಿತ್ತು.
ಆಗಸ್ಟ್ 23ರಂದು ರಾತ್ರಿ ಕೊನೆಯ ಶ್ರಾವಣ ಶನಿವಾರದ ಪ್ರಯುಕ್ತ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ದೇಗುಲ ಸಂಘದ ಪದಾಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.