ಪಾವಗಡ: ತಾಲ್ಲೂಕಿನ ಶನೈಶ್ಚರ ದೇಗುಲಕ್ಕೆ ಶನಿವಾರ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು.
ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೀತಲಾಮಭ ಮೂಲ ಯಂತ್ರಕ್ಕೆ ಸಹಸ್ರ ಕುಂಕುಮಾರ್ಚನೆ ನಡೆಯಿತು. ಮೂಲ ಯಂತ್ರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಶನಿವಾರ ಬೆಳಗಿನ ಜಾವ ಕೇಶ ಮುಂಡನಕ್ಕಾಗಿ ಸಾವಿರಾರು ಮಂದಿ ಸರದಿಯಲ್ಲಿ ನಂತಿದ್ದರು. ಸಂಜೆಯವರೆಗೆ ಭಕ್ತರು ದರ್ಶನ ಪಡೆದರು. ಎರಡು ವಾರಗಳಿಗಿಂತಲೂ ಹೆಚ್ಚಿನ ಸಮಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ಬಂದಿದ್ದರು.
ದೇಗುಲ ವೃತ್ತ ಹಾಗೂ ಸುಮಾರು ಅರ್ಧ ಕಿ.ಮೀ ದೂರದವರೆಗೆ ಮಂಡಕ್ಕಿ, ಬೆಂಡು, ಬತ್ತಾಸು, ಪೂಜಾ ಸಾಮಗ್ರಿ, ಟೋಪಿ, ಆಟಿಕೆ, ಇತ್ಯಾದಿ ಅಂಗಡಿಗಳಲ್ಲಿ ಭಕ್ತಾದಿಗಳು ಸಾಮಗ್ರಿ ಖರೀದಿಗೆ ಮುಗಿಬಿದ್ದರು.
ಸಂಜೆ ಹೂವಿನ ಪಲ್ಲಕ್ಕಿಯಲ್ಲಿ ಮೂಲ ವಿಗ್ರಹವಿರಿಸಿ ಉತ್ಸವ ನಡೆಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಲಘು ಉಪಹಾರ ವಿತರಿಸಿದರು.
ದೇಗುಲದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಶನೈಶ್ಚರ ದರ್ಶನ ಪಡೆದ ನಂತರ ಕೋಟೆ ಆಂಜನೇಯ ದರ್ಶನ ಪಡೆದು, ಕೆಲವರು ಪಾವಗಡ ಬೆಟ್ಟ ಏರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.