ಪಾವಗಡ: ತಾಲ್ಲೂಕಿನ ಪೋಲೇನಹಳ್ಳಿ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಗ್ರಾಮಸ್ಥರು ಬೇರೆಡೆ ಹೋಗಲೂ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಂಚಮ್ಮನಹಳ್ಳಿ-ಪೋಲೇನಹಳ್ಳಿ,-ಸಾಸಲಕುಂಟೆ ರಸ್ತೆ ಕಿತ್ತುಹೋಗಿ ಗುಂಡಿಗಳು ಬಿದ್ದಿವೆ. ಮೊಣಕಾಲುದ್ದದ ಗುಂಡಿಗಳನ್ನು ತಪ್ಪಿಸಲು ಹೋಗಿ ನಿತ್ಯ ವಾಹನ ಸವಾರರು ಅಪಘಾತಕ್ಕೆ ಈಡಾಗುತ್ತಿದ್ದಾರೆ. ಲಿಂಗದಹಳ್ಳಿ, ವೈ.ಎನ್.ಹೊಸಕೋಟೆ ಸೇರಿದಂತೆ ವಿವಿದ ಪ್ರದೇಶಗಳಿಗೆ ಇದೇ ರಸ್ತೆ ಮೂಲಕ ಹೋಗಬೇಕು. ರಸ್ತೆ ಹಾಳಾಗಿರುವುದರಿಂದ ಶಾಲಾ, ಕಾಲೇಜು, ಆಸ್ಪತ್ರೆಗೆ ಹೋಗಲೂ ತಡವಾಗುತ್ತಿದೆ. ಸಕಾಲಕ್ಕೆ ಆಸ್ಪತ್ರೆಗೆ ಹೋಗಲಾಗದೆ ಜೀವ ಕಳೆದುಕೊಂಡಿರುವ ನಿದರ್ಶನ ಇದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ತುರ್ತು ಸಂದರ್ಭಗಳಲ್ಲಿ ತುರ್ತು ವಾಹನಗಳು ಬರಲೂ ಸಾಧ್ಯವಾಗದ ಸ್ಥಿತಿ ಇದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಬಾಡಿಗೆ ವಾಹನ ಸಿಗುತ್ತಿಲ್ಲ. ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳು ಇತ್ತ ಸುಳಿಯುತ್ತಿಲ್ಲ ಎಂದು ದೂರಿದ್ದಾರೆ.
ಶೀಘ್ರ ರಸ್ತೆ ದುರಸ್ತಿಪಡಿಸಬೇಕೆಂದು ಗ್ರಾಮದ ಪಿ.ಎನ್ ಶಾಂತಕುಮಾರ್, ಓಂಕಾರ್, ನಾಗರಾಜು, ಪಿ.ಸಿ ನಾಗೇಂದ್ರಯ್ಯ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.