ತುಮಕೂರು: ತುಮಕೂರು, ಶಿರಾ, ತಿಪಟೂರು ಮತ್ತು ಪಾವಗಡ ತಾಲ್ಲೂಕು ಹೊರತುಪಡಿಸಿ ಬೇರೆ ತಾಲ್ಲೂಕುಗಳಲ್ಲಿ ಕೃಷಿ, ಉದ್ಯೋಗ ಖಾತ್ರಿ ಮತ್ತು ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳ ಚಟುವಟಿಕೆಗಳನ್ನು ಅಂತರ ಕಾಯ್ದುಕೊಂಡು ನಡೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ವಿಡಿಯೊ ಕಾನ್ಫರೆನ್ಸ್ನಲ್ಲಿ ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಮುಖ್ಯಮಂತ್ರಿ ವಿಡಿಯೊ ಕಾನ್ಫರೆನ್ಸ್ನಲ್ಲಿ ಜಿಲ್ಲೆಯ ಸ್ಥಿತಿ ಗತಿಯ ಚಿತ್ರಣವನ್ನು ಯಡಿಯೂರಪ್ಪ ಅವರಿಗೆ ನೀಡಿದರು.
ತುಮಕೂರಿನಲ್ಲಿ ಕೈಗಾರಿಕೆ ಚಟುವಟಿಕೆ ಆರಂಭಿಸಲು ನೆರೆಯ ಜಿಲ್ಲೆಗಳಿಂದ ಸಿಬ್ಬಂದಿ ಮತ್ತು ಕಾರ್ಮಿಕರು ಬರಬೇಕಾಗಿದೆ ಎಂದು ಮಾಲೀಕರು ಹೇಳುತ್ತಿದ್ದಾರೆ. ಬೇರೆ ಜಿಲ್ಲೆಯಿಂದ ತುಮಕೂರಿಗೆ ಕಾರ್ಮಿಕರು, ಸಿಬ್ಬಂದಿ ಬರುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ನಗರದಲ್ಲಿ 75 ಅಕ್ಕಿ ಗಿರಣಿಗಳಿದ್ದು ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಆದರೆ ಬೇರೆ ಜಿಲ್ಲೆಯಿಂದ ಕೂಲಿ ಕಾರ್ಮಿಕರು ಹಾಗೂ ಕುಶಲಕರ್ಮಿಗಳನ್ನು ಕರೆಸಿ ಮಾಡುವ ಕೆಲಸ ಕಾರ್ಯಗಳಿಗೆ ಅಡ್ಡಿ ಆಗಿದೆ ಎಂದು ಮುಖ್ಯಮಂತ್ರಿ ಗಮನಕ್ಕೆ ತಂದರು.
ಎಸ್ಪಿ ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಡಿಎಚ್ಒ ಡಾ.ಚಂದ್ರಿಕಾ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ವಿನಾಯಿತಿಗೆ ಸಿದ್ಧ
ಶಿರಾ ಹಾಗೂ ಮಧುಗಿರಿ ಉಪವಿಭಾಗದ ತಾಲ್ಲೂಕುಗಳು ಆಂಧ್ರಪ್ರದೇಶದ ಗಡಿಗಳಿಗೆ ಹೊಂದಿಕೊಂಡಿವೆ. ಹಿಂದೂಪುರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಈ ಭಾಗದಲ್ಲಿ ಬಿಗಿ ಹೆಚ್ಚಿಸಲಾಗಿದೆ. ತುಮಕೂರು ನಗರ, ಶಿರಾ ಸೇರಿದಂತೆ ಸೋಂಕು ತಗುಲುವ ವಾತಾವರಣವಿರುವ ತಾಲ್ಲೂಕುಗಳನ್ನು ಹೊರತುಪಡಿಸಿ ಇತರ ತಾಲ್ಲೂಕುಗಳಲ್ಲಿ ನಿರ್ಬಂಧಕ್ಕೆ ವಿನಾಯಿತಿ ನೀಡಲು ಸಿದ್ಧರಿದ್ದೇವೆ ಎಂದು ಮಾಧುಸ್ವಾಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.