ತುಮಕೂರು: ಕೊರೊನಾ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿದ್ದರೆ, ತುಮಕೂರು ವಿಶ್ವವಿದ್ಯಾಲಯ ಆನ್ಲೈನ್ನಲ್ಲಿ ಪಿಎಚ್.ಡಿ ವಿದ್ವತ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಗಮನ ಸೆಳೆದಿದೆ.
ವಿ.ವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಶಿವಕೀರ್ತಿ ಅವರು ‘ಗಿರೀಶ್ ಕಾರ್ನಾಡರ ನಾಟಕಗಳಲ್ಲಿ ಪ್ರತಿಮಾ ದೃಷ್ಟಿ’ ಮತ್ತು ಮಂಜುನಾಥ ಕರಬ ಅವರು ‘ಕರ್ನಾಟಕ ಕರಾವಳಿಯ ಪರಶುರಾಮ ಪರಂಪರೆ: ಆಧುನಿಕ ಸಂಕಥನಗಳು’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸುತ್ತಿದ್ದರು.
ಇಬ್ಬರಿಗೂ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಮಾರ್ಗದರ್ಶಕರಾಗಿದ್ದಾರೆ. ಸಂಶೋಧನೆಯ ಅಂತಿಮ ಹಂತದಲ್ಲಿ ವಿದ್ವತ್ ಪರೀಕ್ಷೆ ನಡೆಸಲು ವಿ.ವಿ ಅನುಮತಿ ನೀಡಿತ್ತು. ಆದರೆ ಪರೀಕ್ಷೆಗೂ ಮೊದಲೇ ಲಾಕ್ಡೌನ್ ಎದುರಾಯಿತು.
ಈ ಸಮಯದಲ್ಲಿ ಆನ್ಲೈನ್ ಮೂಲಕವೇ ಪರೀಕ್ಷೆ ನಡೆಸುವಂತೆ ಸೂಚಿಸಿದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಅಗತ್ಯ ಆಡಳಿತಾತ್ಮಕ ಅನುಕೂಲಗಳನ್ನು ಕಲ್ಪಿಸಿದರು. ವಾಟ್ಸ್ಆ್ಯಪ್ ಮೂಲಕ ವಿದ್ವತ್ ಪರೀಕ್ಷಾ ಬಳಗ ರಚಿಸಿದ ಕನ್ನಡ ವಿಭಾಗವು ಯೂಟ್ಯೂಬ್ನಲ್ಲಿ ತಮ್ಮ ಸಂಶೋಧನೆ ಪ್ರಸ್ತುತ ಪಡಿಸುವಂತೆ ಸಂಶೋಧನಾರ್ಥಿಗಳಿಗೆ ಸೂಚಿಸಿತು.
ಇಬ್ಬರೂ ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ವೈಧಾನಿಕತೆ ಮತ್ತು ತಾತ್ವಿಕತೆಗಳನ್ನು ವಿವರಿಸಿದರು. ಡಾಕ್ಟರಲ್ ಸಮಿತಿಯು ಸಂಶೋಧನಾರ್ಥಿಗಳ ಪರೀಕ್ಷೆ ನಡೆಸಿತು. ಈ ಎಲ್ಲ ವಿಧಿ– ವಿಧಾನಗಳನ್ನು ದಾಖಲಿಸಿ, ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಿದ ವಿಭಾಗವು ವಿ.ವಿಯಲ್ಲಿ ಇತಿಹಾಸ ಬರೆಯಿತು.
‘ಇಂತಹ ತುರ್ತು ಸಂದರ್ಭದಲ್ಲಿ ಆನ್ಲೈನ್ ಮೂಲಕ ಪಿಎಚ್.ಡಿ ಪರೀಕ್ಷೆ ನಡೆಸಬಹುದು ಎಂದು ಯುಜಿಸಿ ಈಗಷ್ಟೇ ಚಿಂತಿಸುತ್ತಿದೆ. ರಾಷ್ಟ್ರಮಟ್ಟದಲ್ಲಿ ಇನ್ನೂ ಪ್ರಸ್ತಾವ ಹಂತದಲ್ಲಿರುವ ಈ ಪರೀಕ್ಷಾ ಪದ್ಧತಿಯನ್ನು ಕುಲಪತಿಯ ದೂರದೃಷ್ಟಿಯಿಂದಾಗಿ ಪ್ರಾದೇಶಿಕ ಮಟ್ಟದಲ್ಲಿ ಜಾರಿಗೊಳಿಸಲು ಸಾಧ್ಯವಾಯಿತು’ ಎಂದು ಪ್ರೊ.ನಿತ್ಯಾನಂದ ಬಿ.ಶೆಟ್ಟಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.