ADVERTISEMENT

ಹುತಾತ್ಮರ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಿ: ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್

ಪೊಲೀಸ್ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪುತ್ಥಳಿಗೆ ಗೌರವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 15:44 IST
Last Updated 21 ಅಕ್ಟೋಬರ್ 2018, 15:44 IST
ಪೊಲೀಸ್ ಸಿಬ್ಬಂದಿ ಕುಶಾಲ ತೋಪು ಹಾರಿಸಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು
ಪೊಲೀಸ್ ಸಿಬ್ಬಂದಿ ಕುಶಾಲ ತೋಪು ಹಾರಿಸಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿದರು   

ತುಮಕೂರು: ಹುತಾತ್ಮ ಪೊಲೀಸರ ಕುಟುಂಬದವರಿಗೆ ಪುನರ್ವಸತಿ ಕಲ್ಪಿಸುವ ಕೆಲಸ ಮಾಡಿದಾಗ ಮಾತ್ರ ಹುತಾತ್ಮ ದಿನಾಚರಣೆಗೆ ಸಾರ್ಥಕತೆ ಬರಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ಹೇಳಿದರು.

ಭಾನುವಾರ ಜಿಲ್ಲಾ ಪೊಲೀಸ್ ಕಚೇರಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಪುತ್ಥಳಿಗೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದರು.

ಕರ್ತವ್ಯನಿರತರಾದಾಗ ಮಡಿದ ಪೊಲೀಸರ ಸ್ಮರಣೆಗೆ ಇದೊಂದು ಅವಕಾಶ. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಈ ಹುತಾತ್ಮರಿಗೆ ಕೇವಲ ವಂದನೆ ಸಲ್ಲಿಸಿದರೆ ಸಾಲದು. ಅವರ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸುವ ಹೊಣೆಗಾರಿಕೆ ಪೊಲೀಸ್ ಇಲಾಖೆ ಸೇರಿದಂತೆ ಪ್ರತಿಯೊಬ್ಬ ನಾಗರಿಕರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಒತ್ತಡ ಇದ್ದೇ ಇರುತ್ತದೆ. ಆದರೆ, ಪೊಲೀಸರು ದಿನದ 24 ಗಂಟೆಯೂ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗಿ ಕರ್ತವ್ಯ ನಿರ್ವಹಿಸುವ ಅನಿವಾರ್ಯ ಇದೆ. ಪೊಲೀಸರಿಗೆ ನಾಗರಿಕರ ಸಹಕಾರ ಬಹುಮುಖ್ಯವಾದುದು ಎಂದು ನುಡಿದರು.

ಪೊಲೀಸ್ ಎಂಬ ಶಬ್ದದ ಪ್ರತಿ ಅಕ್ಷರಕ್ಕೂ ಒಂದೊಂದು ಅರ್ಥವಿದೆ. ವಿಧೇಯರಾಗಿ, ಧೈರ್ಯಶಾಲಿಗಳಾಗಿ, ಚಾಣಾಕ್ಷರಾಗಿ, ಕಾನೂನು ಪಾಲಕರಾಗಿ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎಂಬ ಅರ್ಥವನ್ನು ಸೂಚಿಸುತ್ತದೆ. ಅದಕ್ಕೆ ತಕ್ಕ ಹಾಗೆಯೇ ನಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಅವರು ತುಮಕೂರು ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದ ಡಿಎಸ್ಪಿ ಬಾಳೇಗೌಡ ಅವರನ್ನೊಳಗೊಂಡಂತೆ ಕರ್ನಾಟಕದ 15 ಮಂದಿ ಹಾಗೂ ದೇಶದಲ್ಲಿ ಹುತಾತ್ಮರಾದ 396 ಪೊಲೀಸರ ಹೆಸರುಗಳನ್ನು ಓದಿ ಅವರ ಸೇವೆ ಸ್ಮರಿಸಿ ಗೌರವ ಸಮರ್ಪಿಸಿದರು.

ಪೊಲೀಸ್ ಸಿಬ್ಬಂದಿ ‘ಕುಶಾಲ ತೋಪು’ ಹಾರಿಸಿ ಹುತಾತ್ಮ ಪೊಲೀಸರಿಗೆ ಗೌರವ ಅರ್ಪಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿಎಸ್ಪಿಗಳಾದ ಕೆ.ಎಸ್.ನಾಗರಾಜ್, ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.