ಕೊಡಿಗೇನಹಳ್ಳಿ: ಕೋಳಿ ಫಾರಂನಲ್ಲಿ ಸತ್ತಿರುವ ಕೋಳಿ ಮತ್ತು ಅದರ ತ್ಯಾಜ್ಯವನ್ನು ಕೆರೆಯಂಗಳದಲ್ಲಿ ಸುರಿಯುತ್ತಿರುವುದರಿಂದ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವಿಠಲಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಐಡಿಹಳ್ಳಿ ಹೋಬಳಿಯ ಗಡಿಭಾಗ ವಿಠಲಾಪುರದಲ್ಲಿ ಒಂದು ಚಿಕ್ಕ ಕೆರೆಯಿದೆ. ಈಚೆಗೆ ಒಬ್ಬರು ಗ್ರಾಮದ ಸಮೀಪದಲ್ಲೇ ಕೋಳಿ ಫಾರಂ ಆರಂಭಿಸಿದ್ದು, ಸತ್ತಿರುವ ಕೋಳಿಗಳನ್ನು ಕೆರೆಯ ಅಂಗಳದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದರಿಂದ ನಾಯಿ, ಪಕ್ಷಿ, ಸತ್ತಿರುವ ಕೋಳಿಗಳನ್ನು ತಿನ್ನುವುದರಿಂದ, ದನ ಕರುಗಳು ಕೆರೆಯ ಗುಂಡಿಗಳಲ್ಲಿ ನಿಂತಿರುವ ನೀರನ್ನು ಕುಡಿಯುವುದರಿಂದ ತ್ಯಾಜ್ಯದ ವಾಸನೆಯಿಂದ ಗ್ರಾಮಸ್ಥರು ಮತ್ತು ಪ್ರಾಣಿ-ಪಕ್ಷಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಒಮ್ಮೆ ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮನವಿ ನೀಡಿದ್ದಾರೆ. ಸಂಬಂಧಪಟ್ಟ ಫಾರಂಗೆ ನೋಟಿಸ್ ನೀಡಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದ್ದರು. ಆದಾಗ್ಯೂ ಕೆರೆಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಅಧಿಕಾರಿಗಳು ಶೀಘ್ರ ಗಮನಹರಿಸಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.