ತುಮಕೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ರಾಜ್ಯದ ಕಲ್ಯಾಣವಾಗುತ್ತದೆ ಎಂದು ಇನ್ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಜಿ.ಬಿ.ವಿನಯ್ಕುಮಾರ್ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಿಂದುಳಿದ ವರ್ಗಗಳ ಕೋಶ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶದ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪದವಿ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರೆ ಐಎಎಸ್, ಐಪಿಎಸ್ ಇನ್ನಿತರೆ ಪರೀಕ್ಷೆಗಳಲ್ಲಿ ಯಶಸ್ಸು ಕಾಣಬಹುದು. ಸೂಕ್ತ ಮಾರ್ಗದರ್ಶನ, ಪರಿಶ್ರಮ, ಸಾಧಿಸುವ ಛಲ ಇರಬೇಕು. ಸುದೀರ್ಘ ಓದು, ಬರವಣಿಗೆ, ಸಂವಹನ ಕೌಶಲ, ಪ್ರಚಲಿತ ವಿದ್ಯಮಾನದ ಜ್ಞಾನ ಹೊಂದಿರಬೇಕು. ಪರೀಕ್ಷಾ ಆಧಾರಿತ ತರಬೇತಿ ಪಡೆದರೆ ಸಹಾಯವಾಗಲಿದೆ ಎಂದು ಸಲಹೆ ಮಾಡಿದರು.
ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಬಡತನ ಈ ಸಮಯಕ್ಕಷ್ಟೇ ಸೀಮಿತವಾಗಬೇಕು. ಉನ್ನತ ಸ್ಥಾನ ಪಡೆದು ಬಡತನ ನಿರ್ಮೂಲನೆ ಮಾಡಬೇಕು’ ಎಂದು ಸಲಹೆ ಮಾಡಿದರು.
ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಹಿಂದುಳಿದ ವರ್ಗಗಳ ಕೋಶದ ನಿರ್ದೇಶಕ ಪ್ರೊ.ಕೆ.ಜಿ.ಪರಶುರಾಮ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೋಶದ ಸಂಯೋಜಕ ಎಂ.ಮುನಿರಾಜು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.