ADVERTISEMENT

ತುಮಕೂರು:ಕುರುಬರ ಪಾದಯಾತ್ರೆ ಸ್ವಾಗತಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:10 IST
Last Updated 27 ಜನವರಿ 2021, 2:10 IST
ತುಮಕೂರು ಕುರುಬರ ಸಂಘದ ಕಚೇರಿಯಲ್ಲಿ ಮಂಗಳವಾರ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ 219ನೇ ಬಲಿದಾನದ ದಿವಸ ಆಚರಿಸಲಾಯಿತು
ತುಮಕೂರು ಕುರುಬರ ಸಂಘದ ಕಚೇರಿಯಲ್ಲಿ ಮಂಗಳವಾರ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣ ಅವರ 219ನೇ ಬಲಿದಾನದ ದಿವಸ ಆಚರಿಸಲಾಯಿತು   

ತುಮಕೂರು: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಕುರುಬ ಸಮುದಾಯದ ಜಾಗೃತಿ ಪಾದಯಾತ್ರೆ ಜ. 28ರಂದು ಜಿಲ್ಲೆ ಪ್ರವೇಶಿಸಲಿದ್ದು, ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಆರ್.ಸುರೇಶ್ ತಿಳಿಸಿದರು.

ಕಾಗಿನೆಲೆ ಕನಕ ಪೀಠದ ನಿರಂಜನಾಪುರಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. 28ಕ್ಕೆ ಪಾದಯಾತ್ರೆ ಜಿಲ್ಲೆ ಪ್ರವೇಶಿಸಲಿದ್ದು, ಸಂಘದಿಂದ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಶಿರಾ ತಾಲ್ಲೂಕು ತಾವರೆಕೆರೆಯಲ್ಲಿ ಸಾರ್ವಜನಿಕರ ಸಮಾವೇಶ ನಡೆಯಲಿದ್ದು, ನಂತರ ಶಿರಾ ನಗರ ಪ್ರವೇಶಿಸಲಿದೆ. ಅಲ್ಲಿನ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ಶಿರಾದಿಂದ ಜ. 29ರಂದು ಹೊರಡುವ ಪಾದಯಾತ್ರೆ 11 ಗಂಟೆಗೆ ದೊಡ್ಡಾಲದಮರ ಬಳಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ‍ಪಾಲ್ಗೊಳ್ಳಲಿದೆ. ಸೀಬಿ ನರಸಿಂಹಸ್ವಾಮಿ ದೇವಾಲಯದಲ್ಲಿ ವಾಸ್ತವ್ಯ ಮಾಡಲಿದೆ. ಜ. 30ರಂದು ಕೋರದಲ್ಲಿ ಸಮಾವೇಶ ನಡೆಸಲಿದೆ. ನಂತರ ತುಮಕೂರು ನಗರದ ಶಿರಾಗೇಟ್‌ನಲ್ಲಿರುವ ಕಾಳಿದಾಸ ಪದವಿಪೂರ್ವ ಕಾಲೇಜಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜ. 31ರಂದು ಬೆಳಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಪ್ರಯಾಣ ಬೆಳೆಸಿ, ಮಂಚಕಲ್ಲುಕುಪ್ಪೆ, ನಂದಿಹಳ್ಳಿ ಮೂಲಕ ದಾಬಸ್‌ಪೇಟೆಗೆ ತರಳಿ ವಾಸ್ತವ್ಯ ಮಾಡಲಿದೆ ಎಂದು ವಿವರಿಸಿದರು.

ADVERTISEMENT

ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಪಾದಯಾತ್ರೆ ಸಂಚರಿಸಲಿದ್ದು, ಭಾಗವಹಿಸುವ ಸಮುದಾಯದ ಜನರಿಗೆ ಊಟ, ವಸತಿ ವ್ಯವಸ್ಥೆಯನ್ನು ಕುರುಬರ ಸಂಘ, ಕಾಳಿದಾಸ ವಿದ್ಯಾವರ್ಧಕ ಸಂಘ ಮಾಡಲಿದೆ. ಪಾದಯಾತ್ರೆಯಲ್ಲಿ ಸುಮಾರು 5 ಸಾವಿರ ಜನರು ಭಾಗವಹಿಸುತ್ತಿದ್ದು, ಕೊವಿಡ್‌–19ನಿಂದಾಗಿ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಫೆ.7ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, 10 ಲಕ್ಷ ಜನರು ಭಾಗವಹಿಸುವರು. ಜಿಲ್ಲೆಯಿಂದ ಒಂದು ಲಕ್ಷ ಜನರು ತೆರಳಲಿದ್ದಾರೆ ಎಂದು ಹೇಳಿದರು.

ಕುರುಬ ಸಮುದಾಯದ ಮುಖಂಡರಾದ ಆರ್‌ಎಂಸಿ ರಾಜು, ಮಾಲೂರಪ್ಪ, ಮಲ್ಲಿಕಾರ್ಜುನ, ಎಂ.ಪಿ.ಕುಮಾರಸ್ವಾಮಿ, ಅನಿಲ್, ನರಸಿಂಹಮೂರ್ತಿ, ಟಿ.ಇ.ರಘುರಾಮ್, ಪಟ್ಟಣ್ಣಯ್ಯ, ಚಂದ್ರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.