ADVERTISEMENT

ತುಮಕೂರು | ಮೌಲ್ಯಮಾಪನಕ್ಕೆ ಕರೆ; ಉಪನ್ಯಾಸಕರ ಆತಂಕ

ಜಿಲ್ಲಾ ಕೇಂದ್ರದಲ್ಲಿಯೂ ವ್ಯವಸ್ಥೆ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಮೇ 2020, 16:59 IST
Last Updated 27 ಮೇ 2020, 16:59 IST

ತುಮಕೂರು: ದ್ವಿತೀಯ ಪಿಯು ಉತ್ತರ ಪತ್ರಿಕೆ ಮೌಲ್ಯಮಾಪನದ ವಿಚಾರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳ ನಿಲುವು ಪದೇ ಪದೇ ಬದಲಾಗುತ್ತಿದ್ದು ಈಗ ಕಡ್ಡಾಯವಾಗಿ ಮೌಲ್ಯಮಾಪನಕ್ಕೆ ಹಾಜರಾಗಬೇಕು ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಜಿಲ್ಲೆಯ ಉಪನ್ಯಾಸಕರನ್ನು ಭಯಬೀಳಿಸಿದೆ.

ಬೆಂಗಳೂರು ವಲಯದ ಜಿಲ್ಲೆಗಳ ಉತ್ತರ ಪತ್ರಿಕೆಯ ಮೌಲ್ಯಮಾಪನವು ಪ್ರಮುಖವಾಗಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೌಲ್ಯಮಾಪನಕ್ಕೆ ನಿಯೋಜನೆಗೊಂಡಿರುವ ಜಿಲ್ಲೆಯ ಬಹುತೇಕ ಉಪನ್ಯಾಸಕರು ಅಲ್ಲಿಗೆ ತೆರಳಿ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳಲು ಭಯಗೊಂಡಿದ್ದಾರೆ. ತುಮಕೂರು ಜಿಲ್ಲಾ ಕೇಂದ್ರದಲ್ಲಿಯೇ ಮೌಲ್ಯಮಾಪನಕ್ಕೆ ವ್ಯವಸ್ಥೆ ಮಾಡಿ. ಇಲ್ಲಿಯೂ ಸೂಕ್ತ ಕಾಲೇಜಿಗಳು ಇವೆ ಎಂದು ಈ ಹಿಂದೆ ಮನವಿ ಸಹ ಸಲ್ಲಿಸಿದ್ದರು.

ಆಗ ಅಧಿಕಾರಿಗಳು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವೇನಲ್ಲ. ನಿಮ್ಮ ಅನುಕೂಲ ನೋಡಿಕೊಂಡು ಬನ್ನಿ ಎಂದು ಮೌಖಿಕವಾಗಿ ತಿಳಿಸಿದ್ದರು. ಆದರೆ ಬುಧವಾರ ಉಪನ್ಯಾಸಕರಿಗೆ ಸಂದೇಶ ಕಳುಹಿಸಿದ್ದು, ನೆರೆ ಜಿಲ್ಲೆಯ ಉಪನ್ಯಾಸಕರು ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದು ಕಡ್ಡಾಯ. ಒಂದು ವೇಳೆ ಗೈರಾದರೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಬೆಂಗಳೂರಿನಲ್ಲಿ ಕೊರೊನಾ ಭೀತಿ ಹೆಚ್ಚಿದೆ. ನಮಗೆ ನೀಡಿರುವ ಕಾಲೇಜುಗಳು ಮೆಜೆಸ್ಟಿಕ್‌ನಿಂದ ಒಂದೊಂದು ದಿಕ್ಕಿನಲ್ಲಿ ಇವೆ. ಊಟ, ನೀರಿನ ವ್ಯವಸ್ಥೆಯೂ ಸರಿ ಇರುವುದಿಲ್ಲ. ತುಮಕೂರು ಜಿಲ್ಲಾ ಕೇಂದ್ರದಲ್ಲಿಯೂ ಉತ್ತಮ ಕಾಲೇಜುಗಳಿವೆ. ಇಲ್ಲಿಯೇ ಮೌಲ್ಯಮಾಪನಕ್ಕೆ ಅವಕಾಶ ಕಲ್ಪಿಸಿದರೆ ಮಾನಸಿಕ ಒತ್ತಡವಿಲ್ಲದೆ ಕೆಲಸ ಮಾಡುತ್ತೇವೆ. ಒತ್ತಾಯದಿಂದ ಕರೆಸಿದರೆ ಮೌಲ್ಯಮಾಪನದ ಮೇಲೆ ಪರಿಣಾಮ ಸಹ ಬೀರಲಿದೆ’ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.

‘ಕಲಾ ವಿಭಾಗದ ಮೌಲ್ಯಮಾಪನ ಬುಧವಾರದಿಂದ ಆರಂಭವಾಗಿದೆ. ಶೇ 5ರಿಂದ 10ರಷ್ಟು ಮಂದಿ ಮಾತ್ರ ಪಾಲ್ಗೊಂಡಿದ್ದಾರೆ’ ಎಂದರು.

ಬಸ್ ವ್ಯವಸ್ಥೆ: ಮೌಲ್ಯಮಾಪನ ಕೇಂದ್ರಗಳಿಗೆ ಹೋಗಿ ಬರಲು ಬೆಳಿಗ್ಗೆ 7ಕ್ಕೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ವ್ಯವಸ್ಥೆ ಮಾಡಲಾಗಿದೆ. ನಿರ್ದೇಶಕರ ಆದೇಶದ ಮೇರೆಗೆ ಉಪಮೌಲ್ಯಮಾಪಕರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.