ತುಮಕೂರು: ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ಕೊಲೆ ಸಂಚು ಪ್ರಕರಣದ ತನಿಖಾ ತಂಡ ಬದಲಾಗಿದ್ದು, ಮಾಗಡಿ ಡಿವೈಎಸ್ಪಿ ಪ್ರವೀಣ್ ಅವರಿಗೆ ತನಿಖೆಯ ಹೊಣೆ ನೀಡಲಾಗಿದೆ.
ಈ ಮುಂಚೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಶಿರಾ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ, ಕ್ಯಾತ್ಸಂದ್ರ ಠಾಣೆಯ ಪಿಎಸ್ಐ ಚೇತನ್ ಅವರನ್ನು ಒಳಗೊಂಡ ತಂಡ ನೇಮಕ ಮಾಡಲಾಗಿತ್ತು. ಇದೀಗ ಹೊಸ ತಂಡ ರಚಿಸಲಾಗಿದೆ.
ಕ್ಯಾತ್ಸಂದ್ರ ಇನ್ಸ್ಪೆಕ್ಟರ್ ರಾಮ್ಪ್ರಸಾದ್, ಜಿಲ್ಲಾ ಪೊಲೀಸ್ ಕಚೇರಿಯ ಇನ್ಸ್ಪೆಕ್ಟರ್ ಅವಿನಾಶ್, ಶಿರಾ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಅವರ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ನಾಲ್ವರ ವಿಚಾರಣೆ: ‘ನನ್ನ ಕೊಲೆಗೆ ಸಂಚು ರೂಪಿಸಿದ್ದು, ತನಿಖೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಆರ್.ರಾಜೇಂದ್ರ ನೀಡಿದ ದೂರಿನ ಮೇರೆಗೆ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಇತರರ ವಿರುದ್ಧ ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎ–1 ಆರೋಪಿ ಸೋಮ ತಲೆ ಮರೆಸಿಕೊಂಡಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಭರತ್, ಯತೀಶ್ರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ರಾಜೇಂದ್ರ ಕೊಲೆಗೆ ಸಂಚು ರೂಪಿಸಿದ ಬಗ್ಗೆ ಸೋಮವಾರ ಆಡಿಯೊ ಹರಿದಾಡಿತ್ತು. ಪುಷ್ಪಾ ಮತ್ತು ರಾಕಿ ಎಂಬುವರ ಮಧ್ಯೆ ನಡೆದ ಸಂಭಾಷಣೆ ಸದ್ದು ಮಾಡಿತ್ತು. ಆಡಿಯೊದಲ್ಲಿ ಸೋಮ ಮತ್ತಿತರರು ರಾಜೇಂದ್ರ ಕೊಲೆಗೆ ಯತ್ನಿಸಿದ ಬಗ್ಗೆ ಪುಷ್ಪಾ ಮಾತನಾಡಿರುವುದು ದಾಖಲಾಗಿತ್ತು. ಪೊಲೀಸರು ಪುಷ್ಪಾ ಮತ್ತು ಯಶೋಧ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಸೋಮನ ಜತೆ ಜೈಲು ಸೇರಿದ್ದ ಪುಷ್ಪಾ: ಸೋಮನ ವಿರುದ್ಧ ಕೊಲೆ ಯತ್ನದ ಆರೋಪ ಮಾಡಿರುವ ಪುಷ್ಪಾ 2023ರಲ್ಲಿ ಡಕಾಯಿತಿ ಪ್ರಕರಣದಲ್ಲಿ ಸೋಮನ ಜತೆಗೆ ಜೈಲು ಸೇರಿದ್ದರು. 63 ವರ್ಷದ ವೃದ್ಧೆಯ ಬಾಯಿಗೆ ಬಟ್ಟೆ ತುರುಕಿ ₹2 ಲಕ್ಷ ಮೌಲ್ಯದ 60 ಗ್ರಾಂ ಮಾಂಗಲ್ಯ ಸರ ದೋಚಿದ್ದ ಆರೋಪ ಎದುರಿಸುತ್ತಿದ್ದಾರೆ.
ತುಮಕೂರಿನ ಕೃಷ್ಣ ನಗರದಲ್ಲಿ ಈ ಕೃತ್ಯ ವೆಸಗಿದ್ದರು. 2023ರ ಸೆ. 20ರಂದು ಬಟ್ಟೆ ಹೊಲಿಸುವ ನೆಪದಲ್ಲಿ ಚಂದ್ರಮ್ಮ ಎಂಬುವರ ಮನೆಗೆ ಹೋಗಿ ಸರ ಕಿತ್ತಿದ್ದರು. ಚಂದ್ರಮ್ಮ ಕೈ ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಚಿನ್ನಾಭರಣ ಕಿತ್ತುಕೊಂಡು ಹೋಗಿದ್ದರು. ಎನ್ಇಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಪುಷ್ಪಾ ಈ ಹಿಂದೆ ಕೆಲ ಸ್ಥಳೀಯ ಮುಖಂಡರನ್ನು ‘ಮಧುಬಲೆ’ಗೆ ಬೀಳಿಸಿದ ಉದಾಹರಣೆಗಳಿವೆ. ರೈಲು ನಿಲ್ದಾಣ ರಸ್ತೆಯ ಉಪ್ಪಾರಹಳ್ಳಿ ಕೆಳ ಸೇತುವೆ ಬಳಿ ಹೋಟೆಲ್ ನಡೆಸುತ್ತಿದ್ದರು. ಸೋಮನ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಪುಷ್ಪಾ ಆತನ ವಿರುದ್ಧವೇ ಆರೋಪ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
‘ಮಧುಬಲೆ ತನಿಖೆ: ಸಿ.ಎಂ ವಿವೇಚನೆಗೆ ಬಿಟ್ಟದ್ದು’
ತುಮಕೂರು: ಮಧುಬಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸೇರಿದಂತೆ ಯಾವ ರೀತಿಯ ತನಿಖೆ ನಡೆಸಬೇಕು ಎಂಬುದು ಮುಖ್ಯಮಂತ್ರಿ ಗೃಹ ಸಚಿವರ ವಿವೇಚನೆಗೆ ಬಿಟ್ಟದ್ದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಪ್ರಕರಣದ ತನಿಖೆ ನಡೆಯುತ್ತಿದೆ. ಈಗ ಏನು ಮಾತನಾಡುವುದು. ನೋಟಿಸ್ ಕೊಟ್ಟರೆ ಕೊಡಲಿ. ಯಾವ ತನಿಖೆ ಆಗುತ್ತದೋ ಆಗಲಿ. ಕೆಲವು ವಿಚಾರ ಹೇಳಲು ಆಗುವುದಿಲ್ಲ’ ಎಂದರು.
‘ಮಧುಬಲೆಗೆ ನಮ್ಮ ಪಕ್ಷ ಬೇರೆ ಪಕ್ಷದವರು ಪ್ರಯತ್ನ ಮಾಡಿರಬಹುದು. ಬೆಂಗಳೂರು ಮುಂಬೈನವರೂ ಇರಬಹುದು. ರಾಜಕೀಯೇತರ ವ್ಯಕ್ತಿಗಳು ಮಾಡಿರಬಹುದು. ಯಾರೇ ಮಾಡಿದರೂ ಇದು ಖಂಡನಾರ್ಹ. ಕಾನೂನು ಬಾಹಿರ ಕ್ರಮಕ್ಕೆ ಕುಮ್ಮಕ್ಕು ನೀಡಿದವರಿಗೆ ಪ್ರಯತ್ನಿಸಿದವರಿಗೆ ದೇವರು ಒಳ್ಳೆಯದು ಮಾಡಲ್ಲ. ಅಂಥವರು ಸಾರ್ವಜನಿಕ ಜೀವನದಲ್ಲಿ ಇರಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.