ಕುಣಿಗಲ್: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ₹ 72,45 ಲಕ್ಷ ಮೊತ್ತದ 2501 ಕ್ವಿಂಟಲ್ ರಾಗಿಯನ್ನು ಖರೀದಿ ಕೇಂದ್ರದ ಅಧಿಕಾರಿಯೇ ದುರುಪಯೋಗಪಡಿಸಿಕೊಂಡ ಬಗ್ಗೆ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖರೀದಿ ಕೇಂದ್ರದ ಅಧಿಕಾರಿ ಬೆಂಗಳೂರಿನ ಶ್ರೀರಾಂಪುರ ನಿವಾಸಿ ವಿ.ಜಿ. ಜವರಯ್ಯ ಅವರ ವಿರುದ್ಧ ದೂರನ್ನು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪಪ್ರಧಾನ ವ್ಯವಸ್ಥಾಪಕ ಬಸವರಾಜು ದೂರು ಸಲ್ಲಿಸಿದ್ದಾರೆ.
ವಿ.ಜೆ. ಜವರಯ್ಯ ಅವರನ್ನು ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂಗ ಕುಣಿಗಲ್ ಮತ್ತು ಹುಳಿಯಾರಿನಲ್ಲಿ ರಾಗಿ ಖರೀದಿ ಕೇಂದ್ರದ ಖರೀದಿ ಅಧಿಕಾರಿಯಾಗಿ ನಿಯೋಜಿಸಿದ್ದು, ಮಾರ್ಚ್ 31ರವರೆಗೆ ಖರೀದಿಸಿದ ಒಟ್ಟು 50014 ಕ್ವಿಂಟಲ್ಗಳಲ್ಲಿ ಒಟ್ಟು 47,409 ಕ್ವಿಂಟಲ್ ದಾಸ್ತಾನು ಸಂಗ್ರಹಣೆ ಬಗ್ಗೆ ಮಾತ್ರ ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಾಕಿ ಉಳಿದ ದಾಸ್ತಾನಿನ ಬಗ್ಗೆ ಖರೀದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹುಳಿಯಾರು ಖರೀದಿ ಕೇಂದ್ರದಲ್ಲಿ 103.50 ಕ್ವಿಂಟಲ್ ರಾಗಿ ದಾಸ್ತಾನು ಭೌತಿಕವಾಗಿದ್ದು, ಬಾಕಿ ಉಳಿದ 2501 ಕ್ವಿಂಟಲ್ ರಾಗಿ ದಾಸ್ತಾನಿನ ಸಂಗ್ರಹಣದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದಾಗ ಭೌತಿಕ ದಾಸ್ತಾನು ಇರಲಿಲ್ಲ. ರಾಜ್ಯ ಉಗ್ರಾಣ ನಿಗಮದ ಮಳಿಗೆಗೆ ಕಳಿಸಿರುವ ಬಗ್ಗೆ ಅಧಿಕೃತ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಈ ರಾಗಿಯನ್ನು ಯಾರಿಗೆ ಮಾರಾಟ ಮಾಡಲಾಗಿದೆ ಎಂಬುದರ ಬಗ್ಗೆ ಪತ್ತೆ ಮಾಡಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.