ತುಮಕೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಹಂತ–ಹಂತವಾಗಿ ನಡೆಸಿ, ವ್ಯವಸ್ಥಿತವಾಗಿ ಪೂರ್ಣಗೊಳಿಸಬೇಕು ಎಂದು ಮಾಜಿ ಶಾಸಕ ರಫೀಕ್ ಅಹ್ಮದ್ ಗುರುವಾರ ಒತ್ತಾಯಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಈಗಾಗಲೇ ನಗರದಲ್ಲಿ ದೂಳು ತುಂಬಿಕೊಂಡಿದೆ. ಬೇಸಿಗೆ ಮುಗಿದು, ಮಳೆಗಾಲ ಆರಂಭವಾದರೆ ಇಡೀ ನಗರದ ತುಂಬ ಕೊಚ್ಚೆ ತುಂಬಿಕೊಳ್ಳುತ್ತದೆ. ಅಂತಹ ದುಸ್ಥಿತಿ ನಗರಕ್ಕೆ ಬರದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ವಹಿಸಬೇಕು ಎಂದುಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಗುತ್ತಿಗೆದಾರರು ಸರಿಯಾಗಿ ಕಾಮಗಾರಿಗಳನ್ನು ನಡೆಸದ ಕಾರಣ, ಅವರಿಗೆ ದಂಡ ವಿಧಿಸುವ ಸ್ಥಿತಿ ಬಂದಿದೆ. ಕುಡಿಯುವ ನೀರು ಸರಬರಾಜು, ಒಳಚರಂಡಿ ಮಂಡಳಿ ಮತ್ತು ಬೆಸ್ಕಾಂ ಸಂಸ್ಥೆಗಳು ಸಹ ಕಾರ್ಯನಿರ್ವಹಣೆಯಲ್ಲಿ ಎಡುವುತ್ತಿವೆ. ಇದನ್ನು ಸಹ ಸರಿಪಡಿಸಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣವನ್ನು ನಿರ್ಲಕ್ಷ ಮಾಡಿದೆ. ಈ ವರ್ಗಗಳಿಗೆ ಸಿಗುತ್ತಿದ್ದ ಅನುದಾನದಲ್ಲಿ ₹1,500 ಕೋಟಿಯಷ್ಟು ಕಡಿತ ಮಾಡಲಾಗಿದೆ. ಇದರಿಂದ ಅಲ್ಪಸಂಖ್ಯಾತರ, ಹಿಂದುಗಳಿದ ಸಮುದಾಯಗಳ ಕಾಲೊನಿಗಳನ್ನು ಅಭಿವೃದ್ಧಿ ಪಡಿಸುವ ಯೋಜನೆಗಳು ನನೆಗುದಿಗೆ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಜೆಟ್ ಬಳಿಕ ಕೃಷ್ಣ ಮೇಲ್ದಂಡೆ ಯೋಜನೆಗಳಿಗೆ ಹೆಚ್ಚುವರಿ ಅನುದಾನ ಘೋಷಣೆ ಮಾಡಿದಂತೆ, ತುಮಕೂರು ಅಭಿವೃದ್ಧಿಗೂ ಹೆಚ್ಚುವರಿ ಅನುದಾನ ಮೀಸಲಿಡಬೇಕು. ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಆಗ್ರಹಿಸಿದರು.
‘ನಾನು ಶಾಸಕನಾಗಿದ್ದಾಗ ಸರ್ಕಾರಿ ಜಮೀನು ಕಬಳಿಸಿದ್ದೇನೆಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಧಾರರಹಿತ ಆರೋಪ ಮಾಡಿದ್ದಾರೆ. ಅವರ ಬಳಿ ದಾಖಲೆ ಇದ್ದರೆ, ಮೊದಲು ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.
***
ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗಿಂತ ಆರ್ಥಿಕ ಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಹೆಚ್ಚು ಗಮನ ಹರಿಸಲಿ
-ರಫೀಕ್ ಅಹ್ಮದ್, ಮಾಜಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.