ADVERTISEMENT

ಮಳೆಗಾಳಿ: ಕತ್ತಲೆಯಲ್ಲಿ ಮುಳುಗಿದ್ದ ನಗರ

ತುಮಕೂರು: ಬಹುತೇಕ ಬಡಾವಣೆಗಳಲ್ಲಿ ಆವರಿಸಿದ ಕತ್ತಲು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 9:44 IST
Last Updated 5 ಅಕ್ಟೋಬರ್ 2019, 9:44 IST
ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಮರವೊಂದು ಬಿದ್ದು ಆಟೊ ಜಖಂಗೊಂಡಿತು
ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಮರವೊಂದು ಬಿದ್ದು ಆಟೊ ಜಖಂಗೊಂಡಿತು   

ತುಮಕೂರು: ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಕೆಲವು ಬಡಾವಣೆಗಳಲ್ಲಿ ಮರಗಳು ಉರುಳಿ ಬಿದ್ದವು. 30 ವಿದ್ಯುತ್‌ ಕಂಬಗಳು ಸಹ ಮುರಿದು ಬಿದ್ದ ಪರಿಣಾಮ ನಗರದ ಅರ್ಧ ಭಾಗವೇ ನಾಲ್ಕು ತಾಸು ಕತ್ತಲೆಯಲ್ಲಿ ಮುಳುಗಿತ್ತು.

ಮಹಾಲಕ್ಷ್ಮಿನಗರ, ರೈಲ್ವೆ ನಿಲ್ದಾಣದ ಪರ್ಯಾಯ ರಸ್ತೆ, ಸಿದ್ಧರಾಮೇಶ್ವರ ಬಡಾವಣೆ, ಗೂಡ್ಸ್‌ಶೆಡ್‌ ಕಾಲೊನಿ, ಹೊರ ವಲಯದ ಹೊಸಳ್ಳಿಯಲ್ಲಿ ಮರಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದವು. ಇದರಿಂದಾಗಿ ಬಟವಾಡೆಯಿಂದ ಗಾಂಧಿನಗರದ ವರೆಗಿನ ಎಲ್ಲ ಪ್ರದೇಶಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಮರ ಬಿದ್ದು ಆಟೊವೊಂದು ಜಖಂಗೊಂಡಿತು. ಆಟೊದಲ್ಲಿ ಯಾರು ಇರಲಿಲ್ಲ. ಅಲ್ಲಲ್ಲಿ ಮರಗಳು ಬಿದ್ದ ಪರಿಣಾಮ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮರಗಳನ್ನು ತೆರವು ಮಾಡಲು ಪಾಲಿಕೆಯ ತಂಡವು ಶ್ರಮಿಸಿತು.

ADVERTISEMENT

ಸಂಜೆ 4.30ರ ಹೊತ್ತಿಗೆ ಶುರುವಾದ ಬಿರುಸಿನ ಗಾಳಿ ಮಳೆಗೆ ನಗರದಲ್ಲಿನ 4 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗಿಡಾದವು. ಇದರಿಂದಾಗಿ ಸಂಜೆಯಿಂದ ರಾತ್ರಿ 8.30ರ ವರೆಗೆ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿತ್ತು. ಜನಜೀವನವೂ ಅಸ್ತವ್ಯಸ್ತವಾಗಿತ್ತು.

ಮಳೆನಿಂತ ಬಳಿಕ 25 ಲೈನ್‌ಮನ್‌ಗಳ ಬೆಸ್ಕಾಂ ತಂಡ ವಿದ್ಯುತ್‌ ಜಾಲವನ್ನು ಸರಿಪಡಿಸಲು ಕಾರ್ಯಪ್ರವೃತ್ತವಾಯಿತು. ರಾತ್ರಿ 8.45ರ ಹೊತ್ತಿಗೆ ಶೇ80ರಷ್ಟು ಕಾರ್ಯವನ್ನು ಪೂರ್ಣಗೊಳಿಸಿ ವಿದ್ಯುತ್‌ ವ್ಯತ್ಯಯವನ್ನು ಸರಿಪಡಿಸಿದ್ದೇವೆ ಎಂದು ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮೆಹಮೂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.