ADVERTISEMENT

ಆರಿದ್ರಾ ಮಳೆ: ರೈತರ ಮುಖದಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 4:48 IST
Last Updated 10 ಜುಲೈ 2021, 4:48 IST
ತುರುವೇಕೆರೆ ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ ಸುರಿದ ಆರಿದ್ರಾ ಮಳೆ ( ಎಡಚಿತ್ರ), ತುಮಕೂರು ನಗರದಲ್ಲಿ ಶುಕ್ರವಾರ ಕೆಲ ಕಾಲ ಉತ್ತಮ ಮಳೆ ಬಿತ್ತು. ಮಳೆಯಲ್ಲೇ ವಾಹನಗಳು ಸಾಗಿದವು
ತುರುವೇಕೆರೆ ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ ಸುರಿದ ಆರಿದ್ರಾ ಮಳೆ ( ಎಡಚಿತ್ರ), ತುಮಕೂರು ನಗರದಲ್ಲಿ ಶುಕ್ರವಾರ ಕೆಲ ಕಾಲ ಉತ್ತಮ ಮಳೆ ಬಿತ್ತು. ಮಳೆಯಲ್ಲೇ ವಾಹನಗಳು ಸಾಗಿದವು   

ತುರುವೇಕೆರೆ: ತಾಲ್ಲೂಕಿನ ಹಲವೆಡೆ ಸುರಿದ ಆರಿದ್ರಾ ಮಳೆ ಮುಂಗಾರು ಬೆಳೆ ಬೆಳೆಯುವ ರೈತರ ಮೊಗದಲ್ಲಿ ಸಂತಸ ತಂದಿದೆ.

ಶುಕ್ರವಾರ ಬೆಳಿಗ್ಗೆ ಗುಡುಗು ಸಹಿತ ಮಳೆ ಸುರಿಯಿತು. ಜನರು ಕೊಡೆ ಹಿಡಿದುಕೊಂಡು ನಿತ್ಯದ ಕೆಲಸ ಆರಂಭಿಸಿದರು. ಕೆಲವೆಡೆ ಹದ ಮಳೆ ಸುರಿದಿದ್ದರಿಂದ ಮುಂಗಾರು ಬಿತ್ತನೆಗೆ ರೈತರು ಭೂಮಿ ಹದ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ.

ಹಲವು ದಿನಗಳಿಂದ ಮಳೆಯಿಲ್ಲದೆ ಸೊರಗಿದ್ದ ರೈತರು ಇದೀಗ ಆರಿದ್ರಾ ಮಳೆಯಿಂದ ಕೊಂಚ ನಿರಾಳರಾಗಿದ್ದಾರೆ. ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ, ಬಾಳೆ ಬೆಳೆಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ರೈತ ನಂಜಪ್ಪ.

ADVERTISEMENT

ತಾಲ್ಲೂಕಿನಾದ್ಯಂತ ಶೇ 94ರಷ್ಟು ಹೆಸರು ಸೇರಿದಂತೆ, ಇನ್ನಿತರ ಪೂರ್ವಮುಂಗಾರು ಬೆಳೆ ಬಿತ್ತನೆ ಮಾಡಲಾಗಿದೆ. ತಾಲ್ಲೂಕಿನ ಕೆಲ ಭಾಗಗಳಲ್ಲಿ ಹೆಸರು ತಾಕು ಕೀಳುವ ಕೆಲಸದಲ್ಲಿ ರೈತರು ಸಕ್ರಿಯರಾಗಿದ್ದಾರೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಉದ್ದು ಬಿಡಿಸುವ ಕಾರ್ಯಕ್ಕೆ ತೊಡಕಾಗಿದೆ. ಮಳೆ ಹೀಗೆ ಮುಂದುವರೆದರೆ ಹೊಲದಲ್ಲಿಯೇ ಮೊಳಕೆಯೊಡೆಯಲಿದೆ ಎಂಬ ಆತಂಕ ರೈತರಲ್ಲಿ ಆರಂಭವಾಗಿದೆ.

ತಾಲ್ಲೂಕಿನ ಮುನಿಯೂರು, ಸಾರಿಗೇಹಳ್ಳಿ, ಮಲ್ಲಾಘಟ್ಟ ಹಾಗೂ ಇನ್ನು ಕೆಲ ಗದ್ದೆ ಬಯಲುಗಳಲ್ಲಿ ಭತ್ತ ಬೆಳೆಯಲಾಗಿದ್ದು, ಭತ್ತದ ಬೆಳೆ ಕಟಾವಿಗೆ ಬಂದಿದೆ. ಕೆಲವು ರೈತರು ಭತ್ತವನ್ನು ಕಟಾವು ಮಾಡಿಸಿದ್ದು, ಗದ್ದೆ ಬಯಲಿನಲ್ಲಿ ಭತ್ತದ ಹುಲ್ಲು ಮಳೆ ನೀರಿಗೆ ಕೊಳೆಯುವ ಆತಂಕದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.