ADVERTISEMENT

ಸಂಸ್ಕಾರಗಳಿಂದ ವ್ಯಕ್ತಿ ಶ್ರೀಮಂತಿಕೆ

ವಿದ್ಯಾರ್ಥಿ ದೇವೋಭವ ಕಾರ್ಯಕ್ರಮದಲ್ಲಿ ವೀರೇಶಾನಂದ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 14:19 IST
Last Updated 7 ಜುಲೈ 2019, 14:19 IST
ವಿದ್ಯಾರ್ಥಿ ದೇವೋಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಸಕ್ತರು
ವಿದ್ಯಾರ್ಥಿ ದೇವೋಭವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಸಕ್ತರು   

ತುಮಕೂರು: ಮಾಹಿತಿ ಸಂಗ್ರಹಕ್ಕೆ ಓದು ಸೀಮಿತವಾಗಬಾರದು. ಪಠ್ಯಪುಸ್ತಕಗಳನ್ನು ಮೀರಿದ ಜ್ಞಾನಭಂಡಾರವಿದೆ. ಅದನ್ನೂ ಪಡೆಯಬೇಕು ಎಂದು ರಾಮಕೃಷ್ಣ–ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ವಿದ್ಯಾಶಂಕರ್‌ ಲರ್ನಿಂಗ್‌ ಸೆಂಟರ್‌ ಆಯೋಜಿಸಿದ್ದ ‘ವಿದ್ಯಾರ್ಥಿ ದೇವೋಭವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜ್ಞಾನವೇ ಶಕ್ತಿ. ಪ್ರಾಮಾಣಿಕ ಪರಿಶ್ರಮ ವಿದ್ಯಾರ್ಥಿಗಳ ಸಾಧನೆ ನಿರ್ಧರಿಸುತ್ತದೆ. ಸಂಸ್ಕಾರಗಳಿಂದ ವ್ಯಕ್ತಿ ಶ್ರೀಮಂತಿಕೆ ದೊರೆಯುತ್ತದೆ. ಶುದ್ಧ ಜೀವನ, ಪವಿತ್ರ ಆಲೋಚನೆ, ಇಚ್ಛಾಪೂರ್ಣ ಪ್ರಯತ್ನ ಮಾನವನನ್ನು ಉನ್ನತಿಗೆ ಏರಿಸುತ್ತದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ADVERTISEMENT

ಮನುಷ್ಯತ್ವದಿಂದಲೇ ದೈವತ್ವಕ್ಕೇರಲು ಸಾಧ್ಯವಿದೆ. ಮನುಷ್ಯನ ವ್ಯಕ್ತಿತ್ವದ ನಿಜವಾದ ಶೋಭೆ ಆತನ ಚಾರಿತ್ರ್ಯ. ಯಶಸ್ವಿ ಜೀವನಕ್ಕಿಂತ ಮೌಲ್ಯಯುಕ್ತ ಜೀವನವನ್ನು ಹೆಚ್ಚು ಗೌರವಿಸುವುದಾಗಿ ವಿಜ್ಞಾನಿ ಐನ್‍ಸ್ಟೀನ್ ಹೇಳಿದ್ದಾರೆ. ನಮ್ಮ ಅಂತಃಸತ್ವ ಮಾತು–ಕೃತಿಗಳಲ್ಲಿ ವ್ಯಕ್ತವಾಗಬೇಕು. ಜೀವನದ ವಸಂತಕಾಲವಾದ ಯೌವನದಲ್ಲಿ ಇಂದ್ರಿಯ ಲೋಲುಪತೆಯೆಡೆಗೆ ಜಾರಬಾರದು’ ಎಂದು ಕಿವಿಮಾತು ಹೇಳಿದರು.

ವಿದ್ವಾನ್ ಮೈಸೂರು ನಾಗರಾಜ್‍, ಆಶ್ರಮವು ಜನತೆಗೆ ಭಾರತೀಯ ಸಂಸ್ಕೃತಿ, ಯೋಗ, ಸಂಗೀತ ಜ್ಞಾನವನ್ನು ಧಾರೆ ಎರೆಯುತ್ತಿದೆ. ಯುವಜನತೆಯ ಕಡೆಗೆ ಹೆಚ್ಚಿನ ಗಮನಹರಿಸಿ ಪ್ರೋತ್ಸಾಹ ನೀಡುತ್ತಿರುವುದು ಸುದೈವವೇ ಆಗಿದೆ ಎಂದು ಹೇಳಿದರು.

ಜಿ.ವಿ.ವಿದ್ಯಾಶಂಕರ್‌, ಭಾರತೀಯ ಸಂಸ್ಕೃತಿಯಲ್ಲಿ ಜನ್ಮದಾತರನ್ನು, ಗುರುಗಳನ್ನು ಮಕ್ಕಳು ಗೌರವಿಸುವುದು ಸಂಪ್ರದಾಯ. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡವರು ಉತ್ತಮ ಪ್ರಜೆಗಳು ಆಗುತ್ತಾರೆ ಎಂದರು.

ಎಂಜಿನಿಯರಿಂಗ್‌ನ ಕೆಮಿಕಲ್ ವಿಭಾಗದಲ್ಲಿನ ಸಂಶೋಧನೆಗೆ ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಸುಧೀರ್ ರಂಗನಾಥ್‍ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಹತ್ತು ಅಶಕ್ತ ತಾಯಂದಿರಿಗೆ ಜೀವಂತ ದುರ್ಗಾಪೂಜೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.