ADVERTISEMENT

ಪರಿಹಾರ ಭರವಸೆ: ಧರಣಿ ವಾಪಸ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 2:20 IST
Last Updated 20 ಜನವರಿ 2021, 2:20 IST
ಕೊರಟಗೆರೆ ತಾಲ್ಲೂಕು ಅಕ್ಕಾಜಿಹಳ್ಳಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಸ್ಥಳ, ದಾಖಲೆ ಪರಿಶೀಲಿಸಿದರು
ಕೊರಟಗೆರೆ ತಾಲ್ಲೂಕು ಅಕ್ಕಾಜಿಹಳ್ಳಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಸ್ಥಳ, ದಾಖಲೆ ಪರಿಶೀಲಿಸಿದರು   

ಕೊರಟಗೆರೆ: ತಾಲ್ಲೂಕಿನ ಅಕ್ಕಾಜಿಹಳ್ಳಿ ಸರ್ವೆ ನಂಬರ್‌ 33ರಲ್ಲಿ 30 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸಿ ಬೆಂಗಳೂರಿನಿಂದ ಬಂದ ಭೂಮಾಫಿಯಾದವರಿಗೆ ತಾಲ್ಲೂಕು ಆಡಳಿತ ಸಾಗುವಳಿ ಚೀಟಿ ನೀಡಿದೆ ಎಂದು ಆರೋಪಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಕಚೇರಿ ಎದುರು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ಮಂಗಳವಾರ ಹಿಂಪಡೆದರು.

ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಅವರು, ‘ಕೂಡಲೇ ಸ್ಥಳ ಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸಲಾಗುವುದು’ ಎಂದು ಭರವಸೆ ನೀಡಿದ ಮೇಲೆ ರೈತರು ಧರಣಿ ಹಿಂಪಡೆದರು.

ಉಪವಿಭಾಗಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈತರ ಹಾಗೂ ಅಧಿಕಾರಿಗಳ ಅಭಿಪ್ರಾಯ ಆಲಿಸಿದರು.

ADVERTISEMENT

‘30 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರಲಾಗುತ್ತಿದೆ. ಆದರೆ ಅದೇ ಜಮೀನಿಗೆ ತಾಲ್ಲೂಕಿನವರಲ್ಲದವರಿಗೆ ಏಕಾಏಕಿ ಸಾಗುವಳಿ ನೀಡುವ ಮೂಲಕ ಅನುಭವದಲ್ಲಿದ್ದ ನಮ್ಮನ್ನು ಹೆದರಿಸಿ ಜಮೀನು ವಶಪಡಿಕೊಂಡಿದ್ದಾರೆ’ ಎಂದು ರೈತ ಕಾಮಣ್ಣ, ದಾಳಿನರಸಪ್ಪ ಹೇಳಿದರು.

ಸ್ಥಳೀಯ ರೈತರ ಜಮೀನನ್ನು ದೌರ್ಜನ್ಯದಿಂದ ಕಿತ್ತುಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ರೈತ ಸಂಘ ಕಲೆಹಾಕಿದೆ. ಅದನ್ನು ಪರಿಶೀಲಿಸಿ ರೈತರಿಗೆ ನ್ಯಾಯ ಕೊಡಬೇಕೆಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರುದ್ರೇಶ ಗೌಡ ಹಾಗೂ ತಾಲ್ಲೂಕು ಅಧ್ಯಕ್ಷ ಸಿದ್ಧರಾಜು ಎಸಿ ಅವರಿಗೆ ಮನವಿ ಮಾಡಿದರು.

ಸ್ಥಳ ಪರಿಶೀಲಿಸಿದಾಗ ಸಮಸ್ಯೆ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳ ವರದಿ ಹಾಗೂ ಸ್ಥಳಿಯ ರೈತರ ದಾಖಲೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.