ತುಮಕೂರು: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವಶಿವಕುಮಾರ ಸ್ವಾಮೀಜಿ ಮೊದಲ ವರ್ಷದ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳಲು ನಾಡಿನ ನಾನಾ ಭಾಗಗಳಿಂದ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ.
ಸುತ್ತೂರು ಶ್ರೀ, ಸಚಿವ ಸಿ.ಟಿ.ರವಿ, ಸೋಮಣ್ಣ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸೇರಿದಂತೆ ನಾನಾ ಮಠಾಧೀಶರು ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಉತ್ತರ ಕರ್ನಾಟಕ ಸೇರಿದಂತೆ ದೂರದ ಜಿಲ್ಲೆಗಳ ಭಕ್ತರು ಶನಿವಾರವೇ ಮಠಕ್ಕೆ ಬಂದಿದ್ದಾರೆ.ಅಪಾರ ಸಂಖ್ಯೆಯ ಭಕ್ತರಿಂದ ಗಿಜಿಗುಡುತ್ತಿರುವ ಮಠದ ಪ್ರಾಂಗಣದಲ್ಲಿ ಭಾನುವಾರಬೆಳಿಗ್ಗೆ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಮುಖ ಶ್ರದ್ಧಾ ಕೇಂದ್ರವಾದ ಶಿವಕುಮಾರ ಶ್ರೀಗಳ ಗದ್ದುಗೆಯ ಹೊರ ಮತ್ತು ಒಳಭಾಗವನ್ನು ಹೂಗಳಿಂದ ಅಲಂಕರಿಸಲಾಗಿದೆ.ಬೆಳಿಗ್ಗೆಯಿಂದ ಗದ್ದುಗೆ ದರ್ಶನಕ್ಕೆ ಭಕ್ತರು ಸಾಲಿಕ್ಕುತ್ತಿದ್ದಾರೆ. ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಮಠದಲ್ಲಿ ವೀರಗಾಸೆ, ನಂದಿಧ್ವಜ ಕುಣಿತ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಮೇಳೈಸಿವೆ. ಮಕ್ಕಳು ವಾದ್ಯಗಳ ಸದ್ದಿಗೆ ನಿಂತಲ್ಲೇ ಕುಣಿಯುತ್ತಿದ್ದಾರೆ.
ಶಿರಾದ ಹಜ್ರತ್ ಸೈಯದ್ ಮೊಹಮದ್ ಷಾ ಖಾದ್ರಿ ಶಿಕ್ಷಣ ಸಂಸ್ಥೆ ಭಕ್ತಿಗೆ ಮಜ್ಜಿಗೆ ಮತ್ತು ನೀರು ವಿತರಣೆ ವ್ಯವಸ್ಥೆ ಮಾಡಿದೆ. ಮಠದ ಪ್ರವೇಶದ್ವಾರದಲ್ಲಿಯೇ ಈ ವ್ಯವಸ್ಥೆ ಇದೆ. ದಣಿವಾರಿಸಿಕೊಳ್ಳಲು ಮಕ್ಕಳು, ಭಕ್ತರು ಇಲ್ಲಿಗೆ ಬರುತ್ತಿದ್ದಾರೆ.
ಸೆಲ್ಫಿ ಸಂಭ್ರಮ
ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಮಠದ ಅಂಗಳದಲ್ಲಿ ಪೂರ್ಣವಾಗಿದೆ. ಆ ಉತ್ಸವದ ಸಾರೋಟನ್ನು ಸಂಸ್ಕೃತ ವೇದ ಪಾಠ ಶಾಲೆ ಮುಂಭಾಗ ನಿಲ್ಲಿಸಿದ್ದು ಅಲ್ಲಿ ಜನರು ತಾ ಮುಂದು ನಾ ಮುಂದು ಎಂದು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ.
ವೇದಿಕೆಯ ಮುಂಭಾಗ ವಚನ ಗಾಯನ ಆಯೋಜಿಸಲಾಗಿದೆ. ವಿವಿಧ ಮಠಾಧೀಶರು ಬರುತ್ತಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರರು, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.