ADVERTISEMENT

ಏಕತೆ ಬೆಳೆಸುವ ಹೃದಯ ಸಂಸ್ಕಾರ ಒಡಮೂಡಲಿ: ಜಾರೋಹಣ ಮಾಡಿದ ಡಿಸಿಎಂ ಡಾ.ಪರಮೇಶ್ವರ

ಜಿಲ್ಲೆಯ ವಿವಿಧೆಡೆ ಸಡಗರ, ಸಂಭ್ರಮದ ಗಣರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 14:02 IST
Last Updated 26 ಜನವರಿ 2019, 14:02 IST
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಪೊಲೀಸ್ ಕವಾಯತು ತಂಡಗಳಿಂದ ವಂದನೆ ಸ್ವೀಕರಿಸಿದರು
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಪೊಲೀಸ್ ಕವಾಯತು ತಂಡಗಳಿಂದ ವಂದನೆ ಸ್ವೀಕರಿಸಿದರು   

ತುಮಕೂರು: ಮಹಾನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವವನ್ನು ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಯಿತು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನೆರವೇರಿಸಿದರು.

'ಆಧುನಿಕ ಜನತಂತ್ರ ವ್ಯವಸ್ಥೆಯ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಪ್ರಗತಿಗಾಗಿ ಶ್ರಮಿಸುತ್ತಿವೆ. ರಾಷ್ಟ್ರದ ಹಿರಿಮೆಯಾದ ಅಹಿಂಸೆ, ಸತ್ಯ, ಶಾಂತಿ ಎಂಬ ಮಂತ್ರಗಳನ್ನು ಜನಾಮಾನಸದಲ್ಲಿ ನೆಲೆಗೊಳಿಸಲು ನಾವೆಲ್ಲರೂ ಸಹೋದರತೆಯಿಂದ ಮುನ್ನಡೆಯಬೇಕಿದೆ’ ಎಂದರು.

ADVERTISEMENT

‘ಇಂತಹ ರಾಷ್ಟ್ರೀಯ ಹಬ್ಬಗಳ ಆಚರಣೆಯಿಂದ ಮಾನವತೆಯನ್ನು ಬೆಳಗುವ, ಸಹನೆಯನ್ನು ಬಿತ್ತುವ, ಏಕತೆಯನ್ನು ಬೆಳೆಸುವ ಹೃದಯ ಸಂಸ್ಕಾರ ನಮ್ಮಲ್ಲಿ ಒಡಮೂಡಲಿ ಎಂದು ಅಶಿಸುತ್ತೇನೆ’ಎಂದು ನುಡಿದರು.

‘ಜಗತ್ತಿನಲ್ಲಿಯೇ ನಮ್ಮ ಸಂವಿಧಾನವು ಬೃಹತ್ತಾದುದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಲಿಖಿತವಾಗಿರುವ ತನ್ನ ಸರಳತೆಯಿಂದಾಗಿ ಸಂಸದೀಯ ವ್ಯವಸ್ಥೆಯ ಸಂಯುಕ್ತ ಸರ್ಕಾರದ ಪ್ರಾಮುಖ್ಯತೆಯನ್ನು ಮತ್ತೆ ಮತ್ತೆ ಎತ್ತಿ ಹಿಡಿಯುತ್ತಿದೆ. ಇಂತಹ ಸಂವಿಧಾನವನ್ನು ನಾವೆಲ್ಲರೂ ಗೌರವಿಸಬೇಕು’ ಎಂದು ನುಡಿದರು.

ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಡಾ.ಪರಮೇಶ್ವರ ವಿವರಿಸಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ,ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.