ಪಾವಗಡ: ಪಟ್ಟಣದ ತುಮಕೂರು ರಸ್ತೆ ಬದಿಯಲ್ಲಿರುವ ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನದ ಬಳಿ ಅಗತ್ಯ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಸಸ್ಯೋದ್ಯಾನ ಇದೆ. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಳಿಗ್ಗೆ, ಸಂಜೆ ವೇಳೆ ಉದ್ಯಾನಕ್ಕೆ ಬರುತ್ತಾರೆ. ಆದರೆ, ಈ ಮಾರ್ಗದಲ್ಲಿ ವಾಹನಗಳು ಅತ್ಯಂತ ವೇಗವಾಗಿ ಸಂಚರಿಸುವುದರಿಂದ ಆಪಘಾತಗಳು ನಡೆಯುವ ಸಂಭವವಿದೆ. ಈಗಾಗಲೇ ರಸ್ತೆ ದಾಟುವಾಗ ಸಾಕಷ್ಟು ಅವಘಡಗಳು ನಡೆದಿರುವ ನಿದರ್ಶನಗಳಿವೆ ಎಂದು ಸಸ್ಯೋದ್ಯಾನಕ್ಕೆ ಆಗಮಿಸುವ ಮಹಿಳೆಯರು ದೂರಿದ್ದಾರೆ.
ಇದೇ ಪ್ರದೇಶದಲ್ಲಿ ಕಣಿವೆ ಲಕ್ಷ್ಮಿನರಸಿಂಹ ಸ್ವಾಮಿ ದೇಗುಲ, ಅಯ್ಯಪ್ಪ ಸ್ವಾಮಿ ದೇಗುಲ, ಅರಣ್ಯ ಇಲಾಖೆಯಿದೆ. ಕೆಲವು ದಿನಗಳ ಹಿಂದೆ ಲಾರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ನಿತ್ಯ ಅಪಘಾತ ನಡೆಯುತ್ತಿವೆ. ಜೀವಗಳಿಗೆ ಹಾನಿಯಾಗುವ ಮುನ್ನ ಕೆಶಿಪ್ ಅಧಿಕಾರಿಗಳು ವೇಗ ನಿಯಂತ್ರಕ ಅಳವಡಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.