ತುಮಕೂರು: ಕರ್ನಾಟಕದ ಹಲವು ಭಾಗಗಳಲ್ಲಿ ಕಾಡುಗೊಲ್ಲರು ಅರೆಅಲೆಮಾರಿ ಸಂಸ್ಕೃತಿಯೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಈ ಜನಾಂಗವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಸಂಸದ ಜಿ.ಎಸ್.ಬಸವರಾಜು ಲೋಕಸಭೆಯಲ್ಲಿ ಒತ್ತಾಯಿಸಿದರು.
ತುಮಕೂರು, ಕೋಲಾರ, ಚಿತ್ರದುರ್ಗ, ಹಾಸನ, ದಾವಣಗೆರೆ, ಬಳ್ಳಾರಿ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನಸಂಖ್ಯೆಯ ಕಾಡುಗೊಲ್ಲರು ಇದ್ದಾರೆ. ಈ ಜನಾಂಗ ತಮ್ಮದೇ ರೀತಿಯಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದು, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಕಾಡುಗೊಲ್ಲರ ಹಟ್ಟಿಗಳು, ಗುಡಿಸಲು, ಆಚಾರ ವಿಚಾರಗಳು ತುಂಬಾ ಸಾಂಪ್ರದಾಯಿಕವಾಗಿದ್ದು, ಹಿಂದುಳಿದಿದ್ದಾರೆ. ಇವರ ಜೀವನ ವಿಧಾನ ಗಮನಿಸಿದರೆ ಇನ್ನು ಯಾವುದೋ ಶತಮಾನದಲ್ಲಿ ಬದುಕುತ್ತಿದ್ದಾರೆ ಎಂದು ಭಾಸವಾಗುತ್ತದೆ. ಮಹಿಳೆಯರ ಸ್ಥಿತಿಗತಿಯಂತೂ ಶೋಚನೀಯವಾಗಿದೆ. ಋತುಮತಿಯಾದ ಹಾಗೂ ಬಾಣಂತಿ ಮಹಿಳೆಯರನ್ನು ಮನೆಯ ಹಾಗೂ ಹಟ್ಟಿಯ ಹೊರಗಿಟ್ಟು ಆಚರಿಸುವ ಪದ್ಧತಿಗಳು ತುಂಬಾ ಕಷ್ಟಕರವಾಗಿವೆ ಎಂದು ವಸ್ತು ಸ್ಥಿತಿಯನ್ನು ಬಿಚ್ಚಿಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.