
ಹುಳಿಯಾರು: ತೆಂಗಿನ ಸೀಮೆಯಲ್ಲಿ ಒಲೆಗೊ ಅಥವಾ ಮನೆಯ ಆವರಣದ ಮೂಲೆಯಲ್ಲೆಲ್ಲೊ ಬಿದ್ದಿರುತ್ತಿದ್ದ ಚಿಪ್ಪಿಗೀಗ ಬೆಲೆ ಬಂದು ಗೃಹಿಣಿಯರ ಅಚ್ಚುಮೆಚ್ಚಿನ ವಸ್ತುವಾಗಿದೆ. ಕೆ.ಜಿಗೆ ₹30ರಂತೆ ಮಾರಾಟವಾಗುತ್ತಿದೆ.
ಕಲ್ಪವೃಕ್ಷ ಎಂದು ಕರೆಸಿಕೊಳ್ಳುವ ತೆಂಗಿನ ಪ್ರತಿ ವಸ್ತುವೂ ಉಪಯೋಗಕ್ಕೆ ಬರುತ್ತದೆ. ಆಗಾಗ ಕೆಲವಕ್ಕೆ ಭಾರಿ ಬೇಡಿಕೆ ಬಂದು ನಿರುಪಯೋಗಿ ವಸ್ತುಗಳು ಸಹ ಮುನ್ನೆಲೆಗೆ ಬರುತ್ತವೆ. ಎಳನೀರು, ಕಾಯಿ, ಕೊಬ್ಬರಿಯಷ್ಟೆ ಪ್ರಾಮುಖ್ಯತೆ ಈಗ ಚಿಪ್ಪಿಗೆ ಬಂದಿದೆ. ಸಾಮಾನ್ಯವಾಗಿ ತೆಂಗು ಹೆಚ್ಚಾಗಿ ಬೆಳೆಯುವ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ತೆಂಗಿನ ಚಿಪ್ಪು ಮತ್ತು ಕಾಯಿಮಟ್ಟೆಯನ್ನು ಗುಂಡಿಗೊ, ತೋಟದ ಮೂಲೆಗಳಿಗೆ ಎಸೆದು ಬಿಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಕೊಬ್ಬರಿಯಷ್ಟೆ ಬೇಡಿಕೆ ಚಿಪ್ಪಿಗೆ ಬಂದಿದ್ದು, ಕೆ.ಜಿಗೆ ₹30ರ ಗಡಿ ದಾಟಿದೆ. ಇದರಿಂದ ಚಿಪ್ಪಿನ ವ್ಯಾಪಾರಿಗಳು ಹೆಚ್ಚಾಗಿದ್ದಾರೆ. ಪ್ರತಿ ದಿನ ಗ್ರಾಮಗಳಲ್ಲಿ ಚಿಪ್ಪಿಗಾಗಿ ತಿರುಗುತ್ತಿದ್ದಾರೆ. ಹಳೆ ಕಬ್ಬಿಣ, ಪೇಪರ್, ಪ್ಲಾಸ್ಟಿಕ್ ಮತ್ತಿತರ ಸಾಮಗ್ರಿಗಳನ್ನು ಕೇಳಿಕೊಂಡು ಬೀದಿಯಲ್ಲಿ ಬರುತ್ತಿದ್ದ ಗುಜರಿಯವರು ಕೂಡ ಕೊಬ್ಬರಿ ಚಿಪ್ಪು, ಕಾಯಿ ಚಿಪ್ಪು ಕೇಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕೊಳ್ಳಲು ಬರುತ್ತಿದ್ದವರು ಈಗ ನಗರ ಪ್ರದೇಶಗಳಲ್ಲೂ ಕೇಳಿಕೊಂಡು ಮನೆ ಬಾಗಿಲಿಗೆ ಬರುತ್ತಿದ್ದಾರೆ.
ಚಿಪ್ಪಿನಿಂದ ಸುಂದರ ಲೋಟ ಸೇರಿದಂತೆ ಆಲಂಕಾರಿಕ ವಸ್ತುಗಳು ತಯಾರಾಗುತ್ತಿವೆ. ಬೆಲೆ ಏರಿಕೆಯಾಗುತ್ತಿದ್ದಂತೆ ಚಿಪ್ಪು ಆರ್ಥಿಕ ಸರಕಾಗುತ್ತಿದೆ. ರಾಶಿಯಲ್ಲಷ್ಟೆ ಮಾರಾಟವಾಗುತ್ತಿದ್ದ ಚಿಪ್ಪು ಚಿಲ್ಲರೆ ವ್ಯಾಪಾರವಾಗಿಯೂ ಮಾರ್ಪಟ್ಟಿದೆ. ಮಹಿಳೆಯರು ತಾವು ಶೇಖರಿಸಿಷ್ಟ ಎರಡು, ಮೂರು ಕೆಜಿಯಷ್ಟನ್ನು ಮನೆಯಲ್ಲಿ ಬಿಡದೆ ವ್ಯಾಪಾರಸ್ಥರು ಕೊಳ್ಳುತ್ತಿದ್ದಾರೆ.
ಬೇಡಿಕೆ ಏಕೆ: ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಚಿಪ್ಪಿನ ಇದ್ದಿಲು ಮತ್ತು ಪುಡಿಗೆ ಭಾರಿ ಬೇಡಿಕೆ ಬಂದಿದೆ. ಇದ್ದಿಲು ಪುಡಿ ನೀರು ಶುದ್ಧೀಕರಣ, ಕಂಪ್ಯೂಟರ್ ಪ್ರಿಂಟರ್ಗೆ ಬಳಕೆಯಾಗುತ್ತಿದೆ. ವಿದೇಶಗಳಲ್ಲಿ ಬೇಡಿಕೆ ಹೆಚ್ಚಾದ ಕಾರಣ ತಮಿಳುನಾಡು ಮತ್ತು ಕೇರಳದ ಕಾರ್ಖಾನೆಗಳು ಕರ್ನಾಟಕದ ತೆಂಗು ಬೆಳೆಯುವ ಜಿಲ್ಲೆಗಳಲ್ಲಿ ಚಿಪ್ಪನ್ನು ಸ್ಪರ್ಧೆಗಿಳಿದು ಖರೀದಿ ಮಾಡುತ್ತಿದೆ ಎನ್ನುತ್ತಾರೆ ಚಿಪ್ಪಿನ ವ್ಯಾಪಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.