ADVERTISEMENT

ರಸ್ತೆ ಬದಿಯೇ ತರಕಾರಿ ಮಾರುಕಟ್ಟೆ

ಸುಸಜ್ಜಿತ ಮಾರುಕಟ್ಟೆ ಇಲ್ಲದೆ ವ್ಯಾಪಾರಿಗಳಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 5:49 IST
Last Updated 23 ನವೆಂಬರ್ 2020, 5:49 IST
ಶಿರಾದ ಅಮರಾಪುರ ರಸ್ತೆಯಲ್ಲಿ ‌ತರಕಾರಿ ಮಾರಾಟ ಮಾಡುತ್ತಿರುವುದು
ಶಿರಾದ ಅಮರಾಪುರ ರಸ್ತೆಯಲ್ಲಿ ‌ತರಕಾರಿ ಮಾರಾಟ ಮಾಡುತ್ತಿರುವುದು   

ಶಿರಾ: ತರಕಾರಿ ಮತ್ತು ಹಣ್ಣು ಮಾರುಕಟ್ಟೆ ನಡೆಸಲು ಸೂಕ್ತವಾದ ಜಾಗವಿಲ್ಲದೆ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ಸ್ಥಿತಿ ನಗರದಲ್ಲಿದೆ. ಇದರಿಂದ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವಂತಾಗಿದೆ.

ಶಿರಾ ನಗರಸಭೆಯಾಗಿ 2006ರಲ್ಲಿ ಮೇಲ್ದರ್ಜೆಗೆ ಏರಿತು. ನಗರಸಭೆಯಾಗಿ 13 ವರ್ಷ ಕಳೆದರು ಕೂಡ ತರಕಾರಿ ಮಾರುಕಟ್ಟೆ ಇಲ್ಲದಿರುವುದರಿಂದ ವ್ಯಾಪಾರಿಗಳಿಗೆ ಕಷ್ಟವಾಗುತ್ತಿದೆ.

ನಗರದಲ್ಲಿ ಒಂದು ಕಡೆ ಸುಸಜ್ಜಿತವಾದ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ತಾಜಾ ತರಕಾರಿ ದೊರೆಯುತ್ತಿತ್ತು. ಆದರೆ ಮಾರುಕಟ್ಟೆ ಸೌಲಭ್ಯ ಇಲ್ಲದಿರುವುದರಿಂದ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವರಿಂದ ತರಕಾರಿ ಖರೀದಿ ಮಾಡಬೇಕಾಗಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ 234ರ ಬುಕ್ಕಾಪಟ್ಟಣ ರಸ್ತೆ, ಅಮರಾಪುರ ರಸ್ತೆಗಳಲ್ಲಿ ತರಕಾರಿ ಮತ್ತು ಹಣ್ಣು ಮಾರಾಟ ಮಾಡುವುದರಿಂದ ಬೆಳಗಿನ ಸಮಯದಲ್ಲಿ ಸಂಚಾರಕ್ಕೆ ಕಷ್ಟವಾಗುತ್ತಿದೆ. ತರಕಾರಿ ಖರೀದಿಗಾಗಿ ಜನರು ಗುಂಪು ಗುಂಪಾಗಿ ಬರುತ್ತಾರೆ. ಪೋಷಕರ ಜತೆಗೆ ಚಿಕ್ಕ ಮಕ್ಕಳು ಬರುವುದರಿಂದ ರಸ್ತೆಯಲ್ಲಿ ಬರುವ ವಾಹನಗಳನ್ನು ನೋಡದೆ ಏಕಾಏಕಿ ನುಗ್ಗುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ.

ಸಮೀಪದಲ್ಲಿರುವ ವಿವೇಕಾನಂದ ಕ್ರೀಡಾಂಗಣಕ್ಕೆ ಜನರು ಬೆಳಗಿನ ಸಮಯದಲ್ಲಿ ವಾಯು ವಿಹಾರಕ್ಕೆ ಬರುತ್ತಿರುತ್ತಾರೆ. ಅವರಿಗೂ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಈಗಾಗಲೇ ಇಲ್ಲಿ ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ. ಬುಕ್ಕಾಪಟ್ಟಣ ರಸ್ತೆಯ ಆರ್ಧ ಭಾಗವನ್ನು ಆಕ್ರಮಿಸಿಕೊಂಡು ತರಕಾರಿ ಮೂಟೆಗಳನ್ನು ಹಾಕಿಕೊಳ್ಳುವುದು ನಿತ್ತಯ ಕಂಡುಬರುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರೂ ಪೊಲೀಸರು ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ನಗರಸಭೆ ಆಡಳಿತ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ಯಾವುದೇ ಮೂಲಭೂತ ಸೌಕರ್ಯ ನೀಡದೆ ಸುಂಕ‌ ವಸೂಲಿ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ವ್ಯಾಪಾರಿಗಳನ್ನು ಕಾದುತ್ತಿದೆ.

ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದವರು ವಾಪಸು ಬಂದಿದ್ದಾರೆ. ಜೀವನ ರೂಪಿಸಿ
ಕೊಳ್ಳಲು ವ್ಯಾಪಾರ ಪ್ರಾರಂಬಿಸಿದ್ದಾರೆ. ವಿವೇಕಾನಂದ ಕ್ರೀಡಾಂಗಣದಲ್ಲಿ ತರಕಾರಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತು, ಕ್ರೀಡಾಂಗಣದಲ್ಲಿ ಗಲೀಜು ಮಾಡುತ್ತಾರೆ ಎಂದು ನಗರಸಭೆಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತರಕಾರಿ ವ್ಯಾಪಾರಿಗಳನ್ಜು ಎತ್ತಂಗಡಿ ಮಾಡಲಾಗಿತ್ತು. ನೂತನ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಸೂಕ್ತ ಕ್ರಮ ತೆಗದು
ಕೊಂಡು ವ್ಯವಸ್ಥಿತವಾದ ತರಕಾರಿ ಮಾರುಕಟ್ಟೆ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.