ADVERTISEMENT

ತುಮಕೂರು: ಸಾಬರ ಪಾಳ್ಯದಲ್ಲಿ 24 ಮನೆ ತೆರವು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 8:32 IST
Last Updated 9 ಅಕ್ಟೋಬರ್ 2021, 8:32 IST
ತುಮಕೂರಿನ ಸಾಬರ ಪಾಳ್ಯದ ರಸ್ತೆಯಲ್ಲಿದ್ದ ಮನೆಗಳನ್ನು ತೆರವುಗೊಳಿಸಲಾಯಿತು
ತುಮಕೂರಿನ ಸಾಬರ ಪಾಳ್ಯದ ರಸ್ತೆಯಲ್ಲಿದ್ದ ಮನೆಗಳನ್ನು ತೆರವುಗೊಳಿಸಲಾಯಿತು   

ತುಮಕೂರು: ಬಿ.ಎಚ್.ರಸ್ತೆಯಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸುವ ಬಟವಾಡಿ ಬಳಿಯ 35ನೇ ವಾರ್ಡ್‌ನ ಸಾಬರ ಪಾಳ್ಯದಲ್ಲಿ ರಸ್ತೆಗೆ ಅಡ್ಡಲಾಗಿದ್ದ ಮನೆಗಳನ್ನು ಶುಕ್ರವಾರ ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು.

ಕಳೆದ 25 ವರ್ಷಗಳಿಂದ ಮನೆಗಳನ್ನು ತೆರವುಮಾಡಿ ರಸ್ತೆ ವಿಸ್ತರಣೆ ಕಾರ್ಯ ಮಾಡಲು ಸಾಧ್ಯವಾಗಿರಲಿಲ್ಲ. ಈಗ ರಸ್ತೆಗೆ ಅಡ್ಡಲಾಗಿದ್ದ 24 ಮನೆಗಳನ್ನು ತೆರವು ಮಾಡುವ ಮೂಲಕ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಯಿತು.

ರೈಲ್ವೆ ಹಳಿ ಸಮೀಪದಿಂದ ರಿಂಗ್ ರಸ್ತೆಗೆ ಸಂಪರ್ಕ ಕಲ್ಪಿಸಲು ಲೋಕೋಪಯೋಗಿ ಇಲಾಖೆ ವತಿಯಿಂದ ₹5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮನೆಗಳನ್ನು ತೆರವು ಮಾಡಿಸಿಕೊಡುವಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಾಲಿಕೆಗೆ ಪತ್ರ ಬರೆದಿದ್ದರು. ಸರ್ವೆ ಮಾಡಿ, ತೆರವಿಗೆ ಗುರುತು ಮಾಡಲಾಗಿತ್ತು. ಇದಕ್ಕೆ ಆರಂಭದಲ್ಲಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.

ADVERTISEMENT

ಯಾವುದೇ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿರಲಿಲ್ಲ. ಕಟ್ಟಡಗಳ ದಾಖಲೆಗಳು ಸಮರ್ಪಕವಾಗಿದ್ದವು. ಇದನ್ನು ಪರಿಶೀಲಿಸಿದ ಪಾಲಿಕೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವ ಭರವಸೆ ಕೊಟ್ಟಿದ್ದರು. ಇದಕ್ಕೆ ಸ್ಪಂದಿಸಿ, ತೆರವಿಗೆ ಸಹಕಾರ ನೀಡಿದರು. ಯಾವುದೇ ವಿರೋಧ ವ್ಯಕ್ತವಾಗಲಿಲ್ಲ.

ಮೇಯರ್ ಬಿ.ಜಿ.ಕೃಷ್ಣಪ್ಪ, ಆಯುಕ್ತರಾದ ರೇಣುಕಾ ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದು, ತೆರವು ಕಾರ್ಯಾಚರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.