ADVERTISEMENT

ಮಂದಾರಗಿರಿ ಬೆಟ್ಟದ ಮೇಲೆ ಸಮವಸರಣ

400 ಅಡಿ ಎತ್ತರದ ಬೆಟ್ಟದ ಮೇಲಿನ ಬಯಲು ಪ್ರದೇಶದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 2:24 IST
Last Updated 8 ಸೆಪ್ಟೆಂಬರ್ 2020, 2:24 IST
ತುಮಕೂರು ಸಮೀಪದ ಮಂದಾರಗಿರಿ ಬೆಟ್ಟದ ಮೇಲೆ ಸಮವಸರಣ ನಿರ್ಮಾಣ ಕಾಮಗಾರಿ
ತುಮಕೂರು ಸಮೀಪದ ಮಂದಾರಗಿರಿ ಬೆಟ್ಟದ ಮೇಲೆ ಸಮವಸರಣ ನಿರ್ಮಾಣ ಕಾಮಗಾರಿ   

ತೋವಿನಕೆರೆ: ತುಮಕೂರು ಜೈನ ಸಮಾಜವು ಹಲವು ಧಾರ್ಮಿಕ ಯೋಜನೆಗಳ ಮೂಲಕ ದೇಶದ ಗಮನ ಸೆಳದಿದೆ. ಈಗ ಮತ್ತೊಂದು ಕಾರ್ಯಕ್ಕೆ ಕೈ ಹಾಕಿ ಮಂದಾರಗಿರಿ ಬೆಟ್ಟದ ಮೇಲೆ ಪುರಾತನ ಜೈನ ಗ್ರಂಥಗಳಲ್ಲಿರುವ ಸಮವಸರಣದ ನಿರ್ಮಾಣವನ್ನು ಪ್ರಾರಂಭ ಮಾಡಿದೆ.

ತುಮಕೂರು– ಬೆಂಗಳೂರು ಮಾರ್ಗದಲ್ಲಿ ಜಾಸ್ ಟೋಲ್ ನಂತರ ಸ್ವಲ್ಪ ಮುಂದೆ ಸಾಗಿ ಎಡ ಭಾಗಕ್ಕೆ ತಿರುಗಿದಾಗ ಸಾವಿರಾರು ವರ್ಷಗಳ ಇತಿಹಾಸವಿರುವ ಜೈನರ ಪವಿತ್ರ ಕ್ಷೇತ್ರ ಮಂದಾರಗಿರಿ ಬೆಟ್ಟ ಕಾಣಿಸುತ್ತದೆ.

ತುಮಕೂರು ಜೈನ ಸಮಾಜವು 400 ಅಡಿ ಎತ್ತರದ ಬೆಟ್ಟದ ಮೇಲಿನ ಬಯಲು ಪ್ರದೇಶದಲ್ಲಿ ₹2 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಜೈನ ಪುರಾಣಗಳಲ್ಲಿ ಉಲೇಖವಾಗಿರುವ ಸಮವಸರಣ ನಿರ್ಮಿಸುವ ಕೆಲಸವನ್ನು ಆರಂಭಿಸಿದೆ.

ADVERTISEMENT

125 ಅಡಿ ಉದ್ದ, 125 ಅಡಿ ಅಗಲದ ಜಾಗದ ಮೇಲೆ ಸಮವಸರಣ ನಿರ್ಮಾಣವಾಗಲಿದ್ದು, 108 ಅಡಿ ಸುತ್ತಳತೆಯ ರಚನೆ ಹೊಂದಿರುತ್ತದೆ. 28 ಅಡಿ ಸುತ್ತಳತೆಯ ಬೃಹತ್ ಮರದ ಕೆಳಗೆ ಪದ್ಮಾಸನದಲ್ಲಿ ಕುಳಿತಿರುವ ಕಾಂಕ್ರೀಟ್‌ನಿಂದ ನಿರ್ಮಿಸುವ ನಾಲ್ಕು ದೇವರ ವಿಗ್ರಹಗಳು ತಲಾ 7 ಅಡಿ ಎತ್ತರ ಹಾಗೂ 5.5 ಅಡಿ ಅಗಲ ಇರಲಿವೆ. 8 ಟನ್ ತೂಕ ಹೊಂದಿರುತ್ತವೆ.

4 ವಿಗ್ರಹಗಳನ್ನು 14 ಅಡಿ ಸುತ್ತಳತೆಯ ಕಮಲದ ಹೂವಿನ ದಳಗಳ ನಡುವೆ ಕೂರಿಸಲಾಗುತ್ತದೆ. ಅದರ ಕೆಳಗೆ ನಾಲ್ಕನೇ ಹಂತದಲ್ಲಿ 4 ಅಡಿ ಎತ್ತರದ ಸಿಂಹಗಳನ್ನು ನಿರ್ಮಿಸಲಾಗುತ್ತದೆ. ತಳ ಭಾಗದಲ್ಲಿ 3 ಹಂತಗಳಿದ್ದು,
ಮೊದಲ ಭಾಗ 24 ಅಡಿ ಸುತ್ತಳತೆ ಹೊಂದಿದ್ದು, ಸಪ್ತ ಭೂಮಿಗಳ ರಚಿಸಲಾಗುತ್ತದೆ. ಗ್ರಂಥಗಳಲ್ಲಿ ಉಲೇಖ ಆಗಿರುವಂತೆ ವಿವಿಧ ಆಕೃತಿಗಳು ಇರಲಿವೆ.

ಸಮವಸರಣ

ಜೈನರಲ್ಲಿ ಸಮವಸರಣಕ್ಕೆ ವಿಶೇಷವಾದ ಸ್ಥಾನವಿದ್ದು, ಭಕ್ತಿಯಿಂದ ಸ್ಮರಿಸುತ್ತಾರೆ. ಸಕಲ ಜೀವರಾಶಿಗಳಿಗೆ ಉಪದೇಶ ಮಾಡುವ ಸಭಾಮಂಟಪ ಭೂಮಿಯಿಂದ ಎತ್ತರದಲ್ಲಿರುತ್ತದೆ. ಪ್ರತಿಯೊಬ್ಬರಿಗೂ ಜಾಗಗಳನ್ನು ನಿಗದಿ ಪಡಿಸಲಾಗಿರುತ್ತದೆ. ಉಪದೇಶ ಮಾಡುವವರು ಯಾವ ಭಾಷೆಯಲ್ಲಿ ಮಾತನಾಡಿದರೂ ಹಾಜರಾಗಿರುವ ಜೀವರಾಶಿಗಳಿಗೆ ಅವರ ಬಾಷೆಗಳಲ್ಲಿ ಅರ್ಥವಾಗುತ್ತದೆ. ಜೈನರ ಗ್ರಂಥಗಳಲ್ಲಿ ಸಮವಸರಣದ ಬಗ್ಗೆ ದಾಖಲೆಗಳು ಸಿಗುತ್ತವೆ.

***

ಯಾತ್ರಾ ಸ್ಥಳವಾಗಲಿದೆ

ಜೈನ ಪುರಾಣಗಳಲ್ಲಿರುವಂತೆ ಬೆಟ್ಟದ ಮೇಲಿನ ಬಯಲು ಪ್ರದೇಶದಲ್ಲಿ ಭೂಮಿ ಮತ್ತು ಆಕಾಶದ ನಡುವೆ ಸಮವಸರಣ ದೇಶದಲ್ಲಿ ಪ್ರಥಮವಾಗಿ ನಿರ್ಮಾಣವಾಗುತ್ತಿದೆ. ಪಿಂಛಿ ಮಂದಿರದ ಮೂಲಕ ಗಮನ ಸೆಳೆದಿರುವ ಮಂದಾರಗಿರಿ ಬೆಟ್ಟ ಮುಂದಿನ ದಿನಗಳಲ್ಲಿ ದೇಶ ವಿದೇಶಿಗರ ಯಾತ್ರ ಸ್ಥಳವಾಗುತ್ತದೆ ಎನ್ನುತ್ತಾರೆ ಪಿಂಛಿ ಮಂದಿರದ ಹಾಗೂ ಈಗ ಸಮವಸರಣದ ಜವಾಬ್ದಾರಿ ವಹಿಸಿ ಕೊಂಡಿರುವ ಟಿ.ಎಲ್.ಅಜಿತ್ ಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.