ತಿಪಟೂರು: ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿಜ್ಞಾನ ಹಬ್ಬ ನಡೆಯಿತು.
ನಗರದ ವಿವಿಧ ಶಾಲೆಗಳಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವಿಜ್ಞಾನ ಹಬ್ಬದಲ್ಲಿ ಭಾಗವಹಿಸಿ, ವಿಜ್ಞಾನ ಮಾದರಿ, ಕಣ್ಣಿನ ರಚನೆ, ನ್ಯೂಟನ್ಸ್ ಕ್ರೆಡಲ್, ವರ್ಣತಂತು, ಆದಿತ್ಯ-ಎಲ್1, ಎಮರ್ಜೆನ್ಸಿ ಲೈಟ್, ಅಣು ರಚನೆ, ವೈಜ್ಞಾನಿಕ ಒಗಟು, ಚಂದ್ರಯಾನ, ಹೈಡ್ರಾಲಿಕ್ ಲಿಫ್ಟ್ ಸೇರಿದಂತೆ ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು.
ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ, ಪಿಯುಸಿ. ನಂತರ ಮುಂದೇನು? ಎಂಬ ಪ್ರಶ್ನೆಗೆ ನಮ್ಮ ವಿದ್ಯಾರ್ಥಿಗಳಲ್ಲಿಯೇ ಉತ್ತರವಿರುವುದಿಲ್ಲ. ಜ್ಞಾನದ ಶಾಖೆಗಳು ವಿಸ್ತಾರವಾಗಿದ್ದು, ಅವುಗಳ ಬಗ್ಗೆ ಪೂರ್ಣ ಮಾಹಿತಿ ಪಡೆದು, ವಿದ್ಯಾರ್ಥಿಯು ತನಗೆ ಇಷ್ಟವಾದ, ಆಸಕ್ತಿಯ ವಿಷಯ ಆಯ್ಕೆ ಮಾಡಿಕೊಂಡು ವ್ಯಾಸಂಗ ಮುಂದುವರೆಸಿದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.
ತುಮಕೂರಿನ ‘ವೇಗಸ್ ನೀಟ್ ಅಕಾಡೆಮಿ’ ನಿರ್ದೇಶಕ ದೇವಿಪ್ರಿಯಾ ಮಾತನಾಡಿ, ಪಿಯುಸಿ ನಂತರ ಉನ್ನತ ವ್ಯಾಸಂಗಕ್ಕೆ ಅವಕಾಶಗಳಿರುವ ಕೋರ್ಸ್ಗಳನ್ನು ಮತ್ತು ಆಯ್ಕೆಯ ಪರೀಕ್ಷಾ ವಿಧಾನಗಳನ್ನು ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸವರಾಜಪ್ಪ ಮಾತನಾಡಿ, ಕಳೆದ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ, ವಿವಿಧ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಆದರೆ ಚಿಂತೆ ಮಾಡುವುದನ್ನು ಬಿಟ್ಟು ಹೆಚ್ಚಿನ ಅಧ್ಯಯನದ ಗಮನ ಹರಿಸಿ ಎಂದು ಸಲಹೆ ನೀಡಿದರು.
ಸವಿತಾ ಸಮಾಜದ ಗೋವಿಂದರಾಜು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ತಾಳ್ಮೆ, ಜಾಣ್ಮೆ ಇದ್ದರೆ ಯಶಸ್ಸು ಲಭಿಸುತ್ತದೆ ಎಂದರು.
ಜಿಲ್ಲೆಯ ಪದವಿ ಪೂರ್ವ ಕಾಲೇಜು ಇಲಾಖೆಯಿಂದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಕೆ.ಲೋಕೇಶ್ ಅವರನ್ನು ಸತ್ಕರಿಸಲಾಯಿತು.
ಸಭೆಯಲ್ಲಿ ಸೈನ್ಸ್ ಕ್ಲಬ್ ಸಹ ಕಾರ್ಯದರ್ಶಿ ಮಂಜುನಾಥ್, ಉಪನ್ಯಾಸಕ ವಿಶ್ವನಾಥ್, ನೌಶೀನ್ ತರನುಮ್, ಕುಸುಮ, ಮೈಲಾರಪ್ಪ, ವಾಣಿಶ್ರೀ ಪೃಥ್ವಿ, ತಿಪ್ಪೇಸ್ವಾಮಿ, ವಸಂತ ಲಕ್ಷ್ಮಿ, ಮಧುಸೂದನ್, ಕಸಾಪ ಕಾರ್ಯದರ್ಶಿ ಬಿ. ನಾಗರಾಜು, ಎಚ್.ಎಸ್. ಮಂಜಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.