ಕುಣಿಗಲ್: ರಾಜ್ಯದ ವಿವಿಧೆಡೆಗಳಲ್ಲಿ ಕುರಿ, ಮೇಕೆ ಮತ್ತು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳರ ತಂಡವನ್ನು ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಮಂಜಪ್ಪ, ರಂಗಪ್ಪ, ಲೋಕೇಶ್, ವೆಂಕಟೇಶ, ನವೀನ ಮತ್ತು ರವಿ ಬಂಧಿತರು ಆರೋಪಿಗಳಿಂದ 15 ಪ್ರಕರಣಗಳಿಗೆ ಸಂಬಂಧಿಸಿದಂತೆ ₹55 ಲಕ್ಷ ಮೌಲ್ಯದ 616 ಗ್ರಾಂ ಚಿನ್ನದ ಒಡವೆ, 108 ಕುರಿಗಳು, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 9ರಂದು ತಾಲ್ಲೂಕಿನ ಗಡಿ ಭಾಗದಲ್ಲಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಕೋನಹಳ್ಳಿ ಗ್ರಾಮದ ಲೀಲಾವತಿ ಮನೆಯಿಂದ 180 ಗ್ರಾಂ ಚಿನ್ನದ ಆಭರಣಗಳನ್ನು ಕಳವು ಮಾಡಿರುವುದು ಸೇರಿದಂತೆ ತುರುವೇಕೆರೆ, ಹಿರಿಸಾವೆ, ಬಾಣವಾರ, ಶಿರಾ, ಪಟ್ಟನಾಯಕನಹಳ್ಳಿ, ತಾವರೆಕೆರೆ, ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಕಳ್ಳತನ ಮತ್ತು ಕುರಿ ಮೇಕೆ ಕಳವು ಮಾಡಿರುವ
ಪ್ರಕರಣ ವಿಚಾರಣೆ ವೇಳೆ ಬೆಳಕಿಗೆ ಬಂದಿವೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ.ಟಿ.ಜೆ, ಡಿವೈಎಸ್ಪಿ ಡಾ.ಗಾನ.ಪಿ.ಕುಮಾರ್, ಕುಣಿಗಲ್ ಸಿಪಿಐ ನಿರಂಜನ್
ಕುಮಾರ್.ಕೆ. ನೇತೃತ್ವದಲ್ಲಿ ಪಿಎಸ್ಐ ಬಿಪಿ ಮಂಜು, ಪ್ರೀತಮ್, ಜ್ಞಾನಮೂರ್ತಿ ಕಾರ್ಯಾಚರಣೆಯ
ತಂಡದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.